ಬೆಂಗಳೂರು: ದೀಪಾವಳಿಯಲ್ಲಿಯೇ ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಗೆ ಬಂಧನದ ಭೀತಿ ಎದುರಾಗಿದ್ದು, ಸದ್ಯ ರೆಡ್ಡಿ ಹೈದರಾಬಾದ್ನಲ್ಲೇ ನಿರೀಕ್ಷಣಾ ಜಾಮೀನು ಸಲ್ಲಿಸಲು ನಿರ್ಧರಿಸಿದ್ದಾರೆ.
ಹೈದರಾಬಾದ್ನಲ್ಲಿ ರೆಡ್ಡಿ ಮನೆ ಇದೆ. ಹೀಗಾಗಿ ನಿರೀಕ್ಷಣಾ ಜಾಮೀನಿಗೆ ಅಲ್ಲಿಂದಲೇ ಅರ್ಜಿ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಲಭಿಸಿದೆ.
ಜನಾರ್ದನ ರೆಡ್ಡಿ ಅವರು ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ವಿಚಾರಣೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಬೆಂಗಳೂರು ಸಿಸಿಬಿ ವಿಶೇಷ ತಂಡವು ಜನಾರ್ದನ ರೆಡ್ಡಿ ಅವರನ್ನು ಭೇಟಿ ಆಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾರ್ವಜನಿಕರಿಗೆ ವಂಚಿಸಿದ್ದ ಕಂಪೆನಿ ಜೊತೆಗೂಡಿ ಜನಾರ್ದನ ರೆಡ್ಡಿ ಅಮಾನೀಕರಣಗೊಂಡ ನೋಟುಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಜನಾರ್ದನ ರೆಡ್ಡಿ ಪಿಎಗಾಗಿ ಸಿಸಿಬಿ ತಂಡ ತೀವ್ರ ಶೋಧ ನಡೆಸುತ್ತಿದೆ. ದೇವನಹಳ್ಳಿ ರೇಸಾರ್ಟ್ ಬಳಿಯೂ ಸಿಸಿಬಿ ತಂಡ ತೆರಳಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಅಲಿಖಾನ್ ಪತ್ತೆಗಾಗಿ ಸಿಸಿಬಿ ತಂಡ ಚುರುಕು ಕಾರ್ಯಾಚರಣೆ ನಡೆಸಿದೆ. ಇತ್ತ ಜನಾರ್ದನ ರೆಡ್ಡಿ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿದೆ. ಹೀಗಾಗಿ ಅವರು ಪತ್ತೆ ಆಗುತ್ತಿದ್ದಂತೆ ಬಂಧಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv