ವಿಜಯನಗರ/ಬಳ್ಳಾರಿ: ಹಣ ಇದ್ದವರು ಮಾತ್ರ ಸಿಎಂ ಆಗುತ್ತಾರೆ ಎನ್ನುವುದು ಇತಿಹಾಸದಲ್ಲೇ ಇಲ್ಲ ಎಂದು ಹೇಳುವ ಮೂಲಕ ಬಸವನಗೌಡ ಪಾಟೀಲ್ ಯತ್ನಾಳ್ಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ರಾಮದುರ್ಗದ ಕಾರ್ಯಕ್ರಮವೊಂದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ದೆಹಲಿಯಿಂದ ಬಂದ ಕೆಲವರು 2,500 ಕೋಟಿ ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂತಾ ಹೇಳಿದ್ರು ಅಂತ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದರು.
ಈ ವಿಚಾರವಾಗಿ ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಹಣ ಇದ್ದವರು ಮಾತ್ರ ಸಿಎಂ ಆಗುತ್ತಾರೆ ಎನ್ನುವುದು ಇತಿಹಾಸದಲ್ಲೇ ಇಲ್ಲ. ಈಗ ಬುದ್ಧಿವಂತಿಕೆ, ಜ್ಞಾನ ಮತ್ತು ಜನರ ಆಶೀರ್ವಾದ ಇದ್ದರೆ ಮಾತ್ರ ಸಿಎಂ ಆಗುತ್ತಾರೆ. ಯತ್ನಾಳ್ ಅವರ ವೈಯಕ್ತಿಕ ಹೇಳಿಕೆಗೆ ಹೆಚ್ಚು ಉತ್ತರಿಸಲ್ಲ ಎಂದಿದ್ದಾರೆ.
ಇದೇ ವೇಳೆ ಎಸ್ಟಿಗೆ ಮೀಸಲಾತಿ ಕೊಟ್ಟೇ ಕೊಡುತ್ತೇವೆ. ನಮ್ಮ ಸರ್ಕಾರ ಅವಧಿ ಮುಗಿಯುವುದರೊಳಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸ್ವಾಮೀಜಿಗಳ ಮನವೊಲಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ; 2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಬಾಂಬ್ ಸಿಡಿಸಿದ ಯತ್ನಾಳ್
ಪಿಎಸ್ಐ ನೇಮಕಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೇ ಆರೋಪ ಮಾಡುತ್ತಿದ್ದಾರೆ. ಒಮ್ಮೆ ಗೃಹ ಸಚಿವ, ಇನ್ನೊಮ್ಮೆ ಅಶ್ವಥ್ ನಾರಾಯಣ್, ಮತ್ತೊಮ್ಮೆ ಸಿಎಂ ರಾಜಿನಾಮೆ ಕೊಡಬೇಕು ಅಂತಾರೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಲಾಗುತ್ತಿದೆ. ನಿಮ್ಮ ಬಳಿ ಏನ ಆದರೂ ಸಾಕ್ಷಿ ಇದ್ದರೆ ಕೊಡಿ ನಂತರ ರಾಜೀನಾಮೆ ಬಗ್ಗೆ ಮಾತನಾಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ; ವಿಜಯಪುರ ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗೆ ಇದೆ: ಯತ್ನಾಳ್
ಈಗಾಗಲೇ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಕಾಂಗ್ರೆಸ್ನವರು ದಾಖಲಾತಿ ಕೊಟ್ಟರೆ ಎಲ್ಲರೂ ರಾಜಿನಾಮೆ ಕೊಡುತ್ತಾರೆ. ದಾಖಲೆ ಇಲ್ಲದೇ ಕೇವಲ ಇವರ ಮಾತುಗಳನ್ನು ಯಾರು ಕೇಳುತ್ತಾರೆ. ಸಣ್ ಖರ್ಗೆ ಅವರು ದಾಖಲಾತಿ ಇಲ್ಲದೇ ಮಾತಾನಾಡುತ್ತಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿದೆ. ಅಲ್ಲಿ ಹೋಗಿ ದಾಖಲಾತಿ ಕೊಡಲಿ. ಆಧಾರ ರಹಿತ ಆರೋಪ ಅವರ ಬದ್ಧತೆಯನ್ನು ತೋರಿಸುತ್ತದೆ. ಈಶ್ವರಪ್ಪ ಅವರು ಕೂಡಾ ತಪ್ಪು ಮಾಡಿರಲಿಲ್ಲ, ಆದರೂ ಆರೋಪ ಮಾಡಿದ್ದಕ್ಕೆ ರಾಜೀನಾಮೆ ಕೊಟ್ಟರು. ಆ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರು. ಹಾಗಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟರಷ್ಟೇ. ಕಾಂಗ್ರೆಸ್ನವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.