ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸಲು ಸಮನ್ವಯ ಸಮಿತಿ ರಚಿಸಲಾಗಿತ್ತು. ಆದರೆ ಈಗ ಕಾಂಗ್ರೆಸ್ ಪಕ್ಷದ ಒಳಗೆ ಸಮನ್ವಯದ ಕೊರತೆ ಎದುರಾಗಿದ್ದು ನಾಯಕರ ನಡುವೆ ಸಮನ್ವಯ ಸಾಧಿಸಲು ಪಕ್ಷದ ಒಳಗೆ ಸಮನ್ವಯ ಸಮಿತಿ ರಚಿಸುವಂತೆ ಮೂಲ ಕಾಂಗ್ರೆಸ್ಸಿಗರು ಹೈ ಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ.
ಕಾಂಗ್ರೆಸ್ ನಾಯಕರ ನಡುವೆಯೆ ಒಂದು ಸಮನ್ವಯ ಸಮಿತಿ ರಚನೆಯಾಗಲಿ. ಸಮನ್ವಯ ಸಮಿತಿ ಹೊಸದೇನಲ್ಲ. ಹಿಂದೆ ಇತ್ತು ಅದರಲ್ಲಿ ತಪ್ಪೇನಿಲ್ಲ ಎಂದು ಹೈ ಕಮಾಂಡ್ ಮುಂದೆ ಒತ್ತಡ ತಂತ್ರ ಅನುಸರಿಸತೊಡಗಿದ್ದಾರೆ.
ಎಲ್ಲರ ಮಧ್ಯೆ ಹೊಂದಾಣಿಕೆಗೆ ಸಮನ್ವಯ ಸಮಿತಿ ಸಹಾಯ ಮಾಡುತ್ತದೆ. ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಮನ್ವಯ ಸಮಿತಿ ಸಹಾಯ ಮಾಡುತ್ತದೆ ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ.
ಈ ಮೂಲಕ ಯಾರೇ ಕೆಪಿಸಿಸಿ ಅಧ್ಯಕ್ಷರಾಗಲಿ, ಯಾರೇ ಸಿಎಲ್ಪಿ ಹಾಗೂ ವಿಪಕ್ಷ ನಾಯಕ ಆಗಲಿ ಎಲ್ಲರೂ ಮೂಲ ಕಾಂಗ್ರೆಸ್ ನಾಯಕರ ಹಿಡಿತದಲ್ಲೇ ಇರಬೇಕು ಎನ್ನುವ ಮಾಸ್ಟರ್ ಸ್ಟ್ರೋಕ್ ಒಂದನ್ನು ಮೂಲ ಕಾಂಗ್ರೆಸ್ಸಿಗರು ಪ್ಲೇ ಮಾಡಿದ್ದಾರೆ.