ರಾಯಚೂರು: ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ (Krishna River) ದೊರೆತ ಪುರಾತನ ವಿಷ್ಣು ಮೂರ್ತಿಗಳು ಹಾಗೂ ಶಿವಲಿಂಗ ವಿಗ್ರಹಗಳು ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ ರಾಜ್ಯ ಹಾಗೂ ತೆಲಂಗಾಣದ (Telangana) ಅರ್ಚಕರು ಹಾಗೂ ಭಕ್ತರು ವಿಗ್ರಹಗಳು ನಮಗೆ ಸೇರಿದ್ದು ಅಂತ ಪೈಪೋಟಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಬಾಲರಾಮನ (Ayodhya Ram Mandir) ವಿನ್ಯಾಸ ಹೋಲುವ ದಶವತಾರಿ ವಿಷ್ಣುರೂಪದ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನ ಮಾತ್ರ ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇಡಲಾಗಿದೆ. ಉಳಿದ ಎರಡು ವಿಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕೃಷ್ಣಾನದಿಯಲ್ಲೆ ಬಿಡಲಾಗಿದೆ. ನದಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು, ಜನ ಕಾಲುದಾರಿಯಲ್ಲಿ ಬಂದು ವಿಗ್ರಹಗಳ ದರ್ಶನ ಪಡೆಯುತ್ತಿದ್ದಾರೆ. ದಶವತಾರಿ ವಿಷ್ಣು ವಿಗ್ರಹಕ್ಕೆ ಮಾತ್ರ ಪೈಪೋಟಿಯಿದ್ದು ಶಿವಲಿಂಗ ಹಾಗೂ ಇನ್ನೊಂದು ವಿಷ್ಣು ವಿಗ್ರಹ ಪತ್ತೆಯಾದ ಜಾಗದಲ್ಲೇ ಉಳಿದಿವೆ.
ಕೃಷ್ಣಾ ನದಿಯಲ್ಲಿ ದೊರೆತ ಮೂರ್ತಿಗಳು 11ನೇ ಶತಮಾನಕ್ಕೆ ಸೇರಿದ ಮೂರ್ತಿಗಳು ಎನ್ನಲಾಗಿದೆ. ಇದುವರೆಗೂ ಪುರಾತತ್ವ ಇಲಾಖೆ ವಿಗ್ರಹಗಳ ಸಂರಕ್ಷಣೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನದಿಯಲ್ಲಿ ದೊರೆತ ಐತಿಹಾಸಿಕ ಮೂರ್ತಿಗಳನ್ನ ಸಂರಕ್ಷಿಸಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಕೃಷ್ಣಾ ನದಿಯಲ್ಲಿ ಶಿವಲಿಂಗ, ವೆಂಕಟೇಶ್ವರ ಮೂರ್ತಿಗಳು ಪತ್ತೆ