ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ತೀವ್ರವಾಗುತ್ತಿದ್ದು, ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಈ ಬೆನ್ನಲ್ಲೇ ಉಕ್ರೇನ್ ನಲ್ಲಿ ಹಲವು ಭಾರತೀಯರು ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಕರೆತರುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡಿದೆ. ಈ ನಡುವೆ ಭಾರತೀಯರು ತಮ್ಮ ಸಾಕು ಪ್ರಾಣಿಗನ್ನು ಯುದ್ಧಭೂಮಿಯಲ್ಲಿ ಬಿಟ್ಟುಬರಲು ಮನಸ್ಸಿಲ್ಲದೇ ತಮ್ಮ ಜೊತೆಗೇ ಕರೆದುಕೊಂಡು ಬರುತ್ತಿದ್ದಾರೆ. ಅದರಲ್ಲೂ ಇಲ್ಲೊಬ್ಬ ವೈದ್ಯ ತಾನು ಮುದ್ದಾಗಿ ಸಾಕಿದ ಪ್ಯಾಂಥರ್ ಮತ್ತು ಚಿರತೆಯನ್ನು ಉಕ್ರೇನ್ನಲ್ಲಿ ಬಿಟ್ಟು ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಾನೆ.
ಡಾನ್ಬಾಸ್ ಪ್ರದೇಶದ ಸೆವೆರೊಡೊನೆಟ್ಸ್ಕ್ನಲ್ಲಿರುವ ಭಾರತೀಯ ವೈದ್ಯ ಡಾ.ಗಿರಿಕುಮಾರ್ ಪಾಟೀಲ್ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ತನ್ನ ನೆಲಮಾಳಿಗೆಯಲ್ಲಿ ಪ್ಯಾಂಥರ್ ಮತ್ತು ಚಿರತೆ ಸಾಕಿಕೊಂಡಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರು ತಮ್ಮ ಮನೆಯ ಕೆಳಗಿನ ಬಂಕರ್ನಲ್ಲಿ ವಾಸಿಸುತ್ತಿದ್ದಾರೆ. ಯುದ್ಧದ ಹಿನ್ನೆಲೆ ಗಿರಿಕುಮಾರ್ ಅವರನ್ನು ತಮ್ಮ ದೇಶಕ್ಕೆ ಮರಳುವಂತೆ ಅಧಿಕಾರಿಗಳು ಹೇಳಲಾಗಿದೆ. ಆದರೆ ಆವರು ಮಾತ್ರ ತಮ್ಮ ಪ್ರಾಣಿಗಳನ್ನು ಬಿಡಲು ಸಿದ್ಧವಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ನಾಯಿ ಬಿಡದಿದ್ದರೆ ನಾನು ಭಾರತಕ್ಕೆ ಬರುತ್ತಿರಲಿಲ್ಲ: ರಂಜಿತ್ ರೆಡ್ಡಿ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಜೀವವನ್ನು ಉಳಿಸಲು ನಾನು ನನ್ನ ಸಾಕುಪ್ರಾಣಿಗಳನ್ನು ಎಂದಿಗೂ ಬಿಡುವುದಿಲ್ಲ. ಯುದ್ಧದ ಹಿನ್ನೆಲೆ ನನ್ನ ಕುಟುಂಬ ಸಹ ನನ್ನನ್ನು ಹಿಂತಿರುಗುವಂತೆ ಒತ್ತಾಯಿಸುತ್ತಿದೆ. ಆದರೆ ನನ್ನ ಸಾಕುಪ್ರಾಣಿಗಳು ನನ್ನ ಮಕ್ಕಳು. ನಾನು ಅವರೊಂದಿಗೆ ಇರುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಅವರನ್ನು ರಕ್ಷಿಸುತ್ತೇನೆ ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಡಾ.ಪಾಟೀಲ್ 2007ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಉಕ್ರೇನ್ಗೆ ಹೋಗಿದ್ದು, ಬಳಿಕ ಡಾನ್ಬಾಸ್ನಲ್ಲೇ ನೆಲೆಸಿದರು. ಅವರು ಅಲ್ಲೇ ಸರ್ಕಾರಿ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸಕರಾಗಿ ಸೇರಿಕೊಂಡರು. ಅವರು ಮೃಗಾಲಯದಲ್ಲಿ ಈ ಎರಡು ಪ್ರಾಣಿಗಳನ್ನು ನೋಡಿ ಅಧಿಕಾರಿಗಳ ಅನುಮತಿ ಮೇರೆಗೆ ದತ್ತು ಪಡೆದು ಸಾಕಲು ಪ್ರಾರಂಭಿಸಿದ್ದಾರೆ. ಅಲ್ಲದೆ ಈ ಪ್ರಾಣಿಗಳಿಗೆ ಜಾಗ್ವಾರ್ ಮತ್ತು ಪ್ಯಾಂಥರ್ ಎಂದು ಹೆಸರನ್ನು ಇಟ್ಟಿದ್ದಾರೆ.
ಜಾಗ್ವಾರ್ ಗೆ 20 ತಿಂಗಳು ಮತ್ತು ಹೆಣ್ಣು ಪ್ಯಾಂಥರ್ ಆರು ತಿಂಗಳು ವಯಸ್ಸಾಗಿದೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಪಾಟೀಲ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತನುಕುಗೆ ಸೇರಿದವರು. ತನ್ನ ಸಾಕುಪ್ರಾಣಿಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಭಾರತ ಸರ್ಕಾರವು ಅವಕಾಶ ನೀಡುತ್ತದೆ ಎಂದು ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!