– ಬಾಂಗ್ಲಾ ಪಡೆಗೆ 149 ರನ್ ಗುರಿ ನೀಡಿದ ಟೀಂ ಇಂಡಿಯಾ
ನವದೆಹಲಿ: ಅತಿಥಿ ಬಾಂಗ್ಲಾ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 148 ರನ್ ಗಳ ಗುರಿ ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಭಾನುವಾರ ನಡೆದ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಶಿಖರ್ ಧವನ್ 41 ರನ್, ಶ್ರೇಯಸ್ ಅಯ್ಯರ್ 22 ರನ್, ರಿಷಭ್ ಪಂತ್ 27 ರನ್ ಸಹಾಯದಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿತು.
- Advertisement 2
ಟಾಸ್ ಗೆದ್ದ ಬಾಂಗ್ಲಾ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಬಾಂಗ್ಲಾ ಬೌಲರ್ ಶಫಿಯುಲ್ ಇಸ್ಲಾಮ್ ಟೀಂ ಇಂಡಿಯಾಗೆ ಆಘಾತ ನೀಡಿದರು. 5 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಎರಡು ಬೌಂಡರಿ ಸೇರಿ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಕನ್ನಡಿಗ ಕೆ.ಎಲ್.ರಾಹುಲ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 17 ಎಸೆತಗಳನ್ನು ಎದುರಿಸಿದ ಕೆ.ಎಲ್.ರಾಹುಲ್ ಎರಡು ಬೌಂಡರಿ ಸಹಾಯದಿಂದ 15 ರನ್ ಗಳಿಸಲು ಶಕ್ತರಾದರು.
- Advertisement 3
- Advertisement 4
ಶ್ರೇಯಸ್ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಆದರೆ ಸಿಕ್ಸ್ ಸಿಡಿಸಲು ಹೋಗಿ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 2 ಸಿಕ್ಸರ್, ಒಂದು ಬೌಂಡರಿ ಸಹಾಯದಿಂದ 22 ರನ್ ಸಿಡಿಸಿದರು. ಈ ಬೆನ್ನಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಶಿಖರ್ ದವನ್ 42 ಎಸೆತಗಳಲ್ಲಿ ಒಂದು ಸಿಕ್ಸ್, 3 ಬೌಂಡರಿ ಸೇರಿ 41 ರನ್ ದಾಖಲಿಸಿದರು. ಟೀಂ ಇಂಡಿಯಾ ಆಲ್ರೌಂಡರ್ ಕ್ರುನಾಲ್ ಪಾಂಡ್ಯ 15 ರನ್ ಹಾಗೂ ವಾಷಿಂಗ್ಟನ್ ಸುಂದರ್ 14 ಸಿಡಿಸುವ ಮೂಲಕ ತಂಡದ ಮೊತ್ತವನ್ನು ಕೊನೆಯ ಹಂತದಲ್ಲಿ ಏರಿಸಿದರು. ಈ ಮೂಲಕ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ದಾಖಲಿಸಿತು.
ರೋಹಿತ್ ವಿಶ್ವದಾಖಲೆ:
ಬಾಂಗ್ಲಾ ವಿರುದ್ಧದ ಮೂರು ಪಂದ್ಯಗಳ ಟಿ-20 ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ-20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಈ ಹಿಂದೆ 2,450 ರನ್ ಗಳಿರುವ ವಿರಾಟ್ ಕೊಹ್ಲಿ ನಂ.1 ಪಟ್ಟದಲ್ಲಿದ್ದರು. ಆದರೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 9 ರನ್ ಗಳಿಸಿದ ಹಿಟ್ಮ್ಯಾನ್ ಒಟ್ಟು 2,452 ರನ್ ಗಳೊಂದಿಗೆ ನಂ.1 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರಿಣಾಮ ಕೊಹ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ಎಡವಿದ ಶಿವಂ:
ಮುಂಬೈ ಮೂಲದ ಶಿವಂ ದುಬೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ ಭರ್ಜರಿ ಮಿಂಚಿದ್ದ ಆಲ್ರೌಂಡರ್ ಶಿವಂ ಬಾಂಗ್ಲಾ ವಿರುದ್ಧದ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಪಂದ್ಯಕ್ಕೂ ಮುನ್ನ ಶಿವಂ ದುಬೇ ನೆಟ್ ಅಭ್ಯಾಸ ನಡೆಸುವ ವೇಳೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಶಿವಂ ದುಬೇ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಜೂನಿಯರ್ ಯುವರಾಜ್ ಸಿಂಗ್ ಎಂದೇ ಕರೆಯಲಾರಂಭಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ದುಬೈ ಕೇವಲ 1 ರನ್ ಗಳಿಸಿ, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.