ಹೈದರಾಬಾದ್: ಶನಿವಾರ ನಡೆದಿದ್ದ 23 ವರ್ಷದ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಹಂತಕರಿಗೆ 1 ಕೋಟಿ ರೂ.ಗೆ ಸುಪಾರಿ ನೀಡಿದ್ದನು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಣಯ್ ಕೊಲೆಯ ಬಳಿಕ ಹಂತಕ ಸ್ಥಳದಿಂದ ನಾಪತ್ತೆಯಾಗಿದ್ದನು. ಇಂದು ಬಿಹಾರ ಪೊಲೀಸರು ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿದ್ದಾರೆ. ಪ್ರಣಯ್ ಕೊಲ್ಲಲು 1 ಕೋಟಿ ರೂ.ಗೆ ಸುಪಾರಿ ನೀಡಿದ್ದರು. ಮುಂಗಡ 18 ಲಕ್ಷ ನೀಡಲಾಗಿತ್ತು ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಪ್ರಣಯ್ನನ್ನು ಆತನ ಗರ್ಭಿಣಿ ಪತ್ನಿ ಅಮೃತಾ ಎದುರೇ ಕೊಲೆ ಮಾಡಲಾಗಿತ್ತು. ಪ್ರಣಯ್ ಕುಮಾರ್ 8 ತಿಂಗಳ ಹಿಂದೆ ಪ್ರೀತಿಸಿದ್ದ 21 ವರ್ಷದ ಅಮೃತ ಜೊತೆ ಮದುವೆ ಮಾಡಿಕೊಂಡಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದ್ರೆ ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು.
ಪತಿಯ ಕೊಲೆ ನೋಡಿದ ಅಮೃತ ಜ್ಞಾನ ತಪ್ಪಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞೆ ಬಂದ ಬಳಿಕ ಪೊಲೀಸರಿಗೆ ಹೇಳಿಕೆ ನೀಡಿರುವ ಅಮೃತ, ನಮ್ಮ ಮನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ನಮ್ಮಿಬ್ಬರ ಮದುವೆಯಿಂದ ಕೋಪಗೊಂಡ ನನ್ನ ತಂದೆ ಹಾಗು ಚಿಕ್ಕಪ್ಪ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು.
ಮನೆಯ ವಿರೋಧದ ನಡುವೆ ನಾವು ಮದುವೆಯಾಗಿ ಚೆನ್ನಾಗಿ ಜೀವನ ನಡೆಸುತ್ತಿದ್ದೇವು. ನಾನು ಐದು ತಿಂಗಳ ಗರ್ಭಿಣಿ ಎಂದು ತಿಳಿದು ಪೋಷಕರು ಪತಿಯನ್ನು ಕೊಲೆ ಮಾಡಿಸಿ ಗರ್ಭಪಾತ ಮಾಡಿಸುವ ಪ್ಲಾನ್ ಮಾಡಿಕೊಂಡಿದ್ದರು. ನನ್ನ ತಂದೆ ಓರ್ವ ಉದ್ಯಮಿಯಾಗಿದ್ದು, ಹಲವು ಪ್ರಭಾವಿ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ತಮ್ಮ ಪ್ರಭಾವ ಬೆಳೆಸಿ ಪ್ರಣಯನನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದರು. ಪ್ರಣಯ್ ಕೊಲೆಯ ಮುನ್ನ ಸಹ ನನಗೆ ಗರ್ಭಪಾತ ಮಾಡಿಸಿಕೊ ಎಂದು ಜೀವ ಬೆದರಿಕೆ ಹಾಕಿದ್ದರು ಎಂದು ಅಮೃತ ಪೊಲೀಸರಿಗೆ ತಿಳಿಸಿದ್ದಾರೆ.
ಅಮೃತಾ ಹೇಳಿಕೆಯನ್ನಾಧರಿಸಿ ಪೊಲೀಸರು ತಂದೆ ಮಾರುತಿ ರಾವ್, ಚಿಕ್ಕಪ್ಪ ಶರವಣ ರಾವ್ ಇಬ್ಬರನ್ನು ಬಂಧಿಸಿದ್ದರು. ಪ್ರಣಯ್ ಮತ್ತು ಅಮೃತ ಹೈಸ್ಕೂಲ್ ನಲ್ಲಿಯೇ ಪ್ರೇಮಪಾಶಕ್ಕೆ ಸಿಲುಕಿದ್ದರು. ಮುಂದೆ ಕಾಲೇಜಿನಲ್ಲಿಯೂ ಇಬ್ಬರ ಪ್ರೇಮ ಮುಂದುವರಿದಿತ್ತು. ಆದ್ರೆ ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಮದುವೆ ಬಳಿಕ ಪ್ರಣಯ್ ಮತ್ತು ಅಮೃತ ಎರಡೂ ಕುಟುಂಬಗಳಿಂದ ದೂರ ಬಂದು ಬೇರೆ ನೆಲೆಕಂಡುಕೊಂಡಿದ್ದರು. ಅಮೃತ ಪೋಷಕರು ಮಾತ್ರ ಮದುವೆ ನಂತರವೂ ದ್ವೇಷ ಸಾಧಿಸುತ್ತಿದ್ದರು.
ಪ್ರಣಯ್ ಕೊಲೆ ಬಳಿಕ ಮರ್ಯದಾ ಹತ್ಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಫೇಸ್ ಬುಕ್ನಲ್ಲಿ Justice For Pranay ಎಂಬ ಪೇಜ್ ಕ್ರಿಯೇಟ್ ಮಾಡಲಾಗಿದ್ದು, ಅಪರಾಧಿಗಲಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರಣಯ್ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸಿ ‘ಅಮರ್ ರಹೇ ಪ್ರಣಯ್’ ಎಂದು ಘೋಷಣೆ ಕೂಗಿದ್ದರು.
ಇತ್ತ ಪ್ರಣಯ್ ಪೋಷಕರು ತಾವು ಸೊಸೆಯನ್ನು ಎಲ್ಲಿಯೂ ಕಳುಹಿಸುವುದಿಲ್ಲ. ಆಕೆ ಮುಂದಿನ ದಿನಗಳಲ್ಲಿ ನಮ್ಮೊಂದಿಗೆಯೇ ಇರುತ್ತಾಳೆ ಎಂದು ತಿಳಿಸಿದ್ದಾರೆ. ಪ್ರಣಯ್ ನನ್ನ ಜೀವ ಆಗಿದ್ದನು. ಇಂದು ಆತನ ಮಗು ನನ್ನ ಹೊಟ್ಟೆಯಲ್ಲಿದ್ದು, ಕಂದನಿಗಾಗಿ ನಾನು ಬದುಕುತ್ತೇನೆ ಎಂದು ದುಃಖಭರಿತವಾಗಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv