ಮುಂಗಾರು ಕೊರತೆ ಹಿನ್ನೆಲೆ ಬೇಸಿಗೆ ಆರಂಭದಲ್ಲೇ ಅದರ ಪರಿಣಾಮದ ಬಿಸಿ ಜನತೆಗೆ ತಟ್ಟಿದೆ. ತಲೆಯ ನೆತ್ತಿಗೆ ಬಿಸಿಲು ಚುರುಗುಟ್ಟುತ್ತಿದೆ. ನೆಲಕ್ಕೆ ಕಾಲಿಟ್ಟರೆ ಕೆಂಡದ ಮೇಲೆ ನಡೆಯುವಂತಹ ಅನುಭವ. ಕೆರೆ-ಕಟ್ಟೆ, ನದಿ-ತೊರೆಗಳು ಬತ್ತಿವೆ. ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ. ಬಿಸಿಲಿಗೆ ಬೆವರಿಳಿಸುತ್ತಿರುವ ಜನರು ಎಲ್ಲೆಲ್ಲೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದು ಊರಿನ ಕಥೆ. ಹಾಗಾದರೆ ಕಾಡಿನ ಕಥೆಯೇನು?
ವನ್ಯಜೀವಿಗಳು ನೀರು-ಆಹಾರ ಅರಸಿ ಹೆಚ್ಚೆಚ್ಚಾಗಿ ಊರುಗಳ ಕಡೆ ದಾಂಗುಡಿ ಇಡುತ್ತಿವೆ. ಕಾಡುಗಳಲ್ಲಿ ಕಿಚ್ಚು ಹೊತ್ತಿ ಉರಿಯುತ್ತಿವೆ. ಹಸಿರು-ಉಸಿರಿನ ತಾಣಗಳು ಈಗ ಜ್ವಾಲಾಮುಖಿ ಕೇಂದ್ರದಂತಾಗುತ್ತಿವೆ. ಎಲ್ಲೆಡೆ ಬಿರು ಬೇಸಿಗೆ ತಾಪದ ಬಿಸಿ ತಾಗುತ್ತಿದೆ. ಇದು ಕಾಡಿನ ಕಥೆ. ಹಾಗಾದರೆ ಎಲ್ಲೆಲ್ಲಿ ಏನಾಗುತ್ತಿದೆ?
ಸುಮಾರು ಒಂದು ವಾರದಿಂದ ತಮಿಳುನಾಡಿನ ನೀಲಗಿರಿಯ ಕುನ್ನೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ವಾರದಂದು ರಾಜ್ಯ ಅರಣ್ಯ ಇಲಾಖೆ ನಡೆಸಿದ ಕಾರ್ಯಾರಣೆಯಲ್ಲಿ ಭಾರತೀಯ ವಾಯುಪಡೆಯು ಸೇರಿಕೊಂಡಿತ್ತು. ‘ಬಾಂಬಿ ಬಕೆಟ್’ ಕಾರ್ಯಾಚರಣೆ ಮೂಲಕ ಕಾಡ್ಗಿಚ್ಚನ್ನು ನಂದಿಸಲು Mi-17 V5 ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿತ್ತು. ಅದು ಸುಮಾರು 16,000 ಲೀಟರ್ ನೀರನ್ನು ಬೆಂಕಿಯ ಮೇಲೆ ಸುರಿಸಿತು.
ಏನಿದು ಬಾಂಬಿ ಬಕೆಟ್?
ಬಾಂಬಿ ಬಕೆಟ್ ಅನ್ನು ಹೆಲಿಕಾಪ್ಟರ್ ಬಕೆಟ್ ಅಥವಾ ಹೆಲಿಬಕೆಟ್ ಎಂದೂ ಕರೆಯುತ್ತಾರೆ. ಇದು ಬಾರೀ ಪ್ರಮಾಣದ ನೀರು ತುಂಬಿಕೊಳ್ಳುವ ಸಾಧನ. ಹೆಲಿಕಾಪ್ಟರ್ ಕೆಳಗಡೆ ಹಗ್ಗದ ಸಹಾಯದಿಂದ ಇದನ್ನು ನೇತು ಹಾಕಲಾಗಿರುತ್ತದೆ. ನದಿ, ಕೆರೆ ಅಥವಾ ಯಾವುದಾದರೂ ಕೊಳದಲ್ಲಿ ನೀರನ್ನು ‘ಬಾಂಬಿ ಬಕೆಟ್’ನಲ್ಲಿ ತುಂಬಿಕೊಂಡು ಬೆಂಕಿ ಹೊತ್ತಿ ಉರಿಯುವ ಸ್ಥಳದಲ್ಲಿ ಸುರಿಯುವುದು. ವೈಮಾನಿಕ ಕಾರ್ಯಾರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯಾಚರಣೆಯ ವಿಧಾನವೇ ‘ಬಾಂಬಿ ಬಕೆಟ್’ ಆಪರೇಷನ್. ರಸ್ತೆ ಸಾರಿಗೆ ಮೂಲಕ ತಲುಪಲು ಕಷ್ಟಕರವಾದ ಅಥವಾ ಅಸಾಧ್ಯವಾದ ಕಾಡ್ಗಿಚ್ಚುಗಳ ಕಾರ್ಯಾರಣೆಗೆ ಬಾಂಬಿ ಬಕೆಟ್ ವಿಶೇಷವಾಗಿ ಸಹಾಯಕವಾಗಿದೆ. ಪ್ರಪಂಚದಾದ್ಯಂತ ಕಾಡಿನ ಬೆಂಕಿಯ ವಿರುದ್ಧ ಹೋರಾಡಲು ಹೆಲಿಕಾಪ್ಟರ್ಗಳನ್ನು ಆಗಾಗ್ಗೆ ನಿಯೋಜಿಸಲಾಗುತ್ತದೆ.
‘ಬೆಂಕಿ ತಿಂಗಳುಗಳು’
ನವೆಂಬರ್ನಿಂದ ಜೂನ್ ವರೆಗೆ ಭಾರತದಲ್ಲಿ ಕಾಡ್ಗಿಚ್ಚಿನ ಕಾಲವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ನೂರಾರು, ಸಾವಿರ ಸಣ್ಣ ಮತ್ತು ದೊಡ್ಡ ಪ್ರಮಾಣದ ಬೆಂಕಿ ಹೊತ್ತಿ ಉರಿಯುತ್ತದೆ. ಬೇಸಿಗೆ ಆರಂಭದ ಫೆಬ್ರವರಿಯಿಂದ ಏಪ್ರಿಲ್-ಮೇ ವರೆಗಿನ ಮಾಸಗಳನ್ನು ಸಾಮಾನ್ಯವಾಗಿ ‘ಬೆಂಕಿಯ ತಿಂಗಳುಗಳು’ ಎಂದು ಕರೆಯಲಾಗುತ್ತಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಭಾರತೀಯ ಅರಣ್ಯ ಸಮೀಕ್ಷೆ (ಎಫ್ಎಸ್ಐ) ಪ್ರಕಟಿಸಿದ ದ್ವೈವಾರ್ಷಿಕ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ವರದಿ (ಐಎಸ್ಎಫ್ಆರ್) ತನ್ನ 2019 ರ ವರದಿಯಲ್ಲಿ, ಭಾರತದ 36% ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವು ಆಗಾಗ್ಗೆ ಬೆಂಕಿಗೆ ಗುರಿಯಾಗುತ್ತದೆ ಎಂದು ದಾಖಲಿಸಿದೆ. ಸುಮಾರು 4% ರಷ್ಟು ಭಾಗವು ‘ಅತ್ಯಂತ ಬೆಂಕಿ ಪೀಡಿತ’ ಪ್ರದೇಶವಾಗಿದೆ. 6% ‘ಅತೀ ಹೆಚ್ಚು ಬೆಂಕಿ ಪೀಡಿತ’ ಪ್ರದೇಶ ಎಂದು ಹೇಳಲಾಗಿದೆ. ಜಾಗತಿಕವಾಗಿ ನೋಡುವುದಾದರೆ, ಒಟ್ಟು ಅರಣ್ಯ ಪ್ರದೇಶದ ಸುಮಾರು 3% ಅಥವಾ ಸುಮಾರು 98 ಮಿಲಿಯನ್ ಹೆಕ್ಟೇರ್ ಅರಣ್ಯವು 2015 ರಲ್ಲಿ ಬೆಂಕಿಯ ಕೆನ್ನಾಲಗೆಯಲ್ಲಿ ಸುಟ್ಟು ಕರಕಲಾಗಿದೆ. ಹೆಚ್ಚಿನ ಅನಾಹುತಗಳು ಉಷ್ಣವಲಯದ ಪ್ರದೇಶಗಳಲ್ಲೇ ಸಂಭವಿಸಿವೆ.
ಭಾರತದ ಎಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸುತ್ತೆ?
ಎಫ್ಎಸ್ಐ ಪ್ರಕಾರ, ಒಣ ಎಲೆಯುದುರುವ ಕಾಡುಗಳಲ್ಲಿ ತೀವ್ರವಾದ ಬೆಂಕಿ ಕಾಣಿಸಿಕೊಳ್ಳುತ್ತದೆ. ಆದರೆ ನಿತ್ಯಹರಿದ್ವರ್ಣ, ಅರೆ-ನಿತ್ಯಹರಿದ್ವರ್ಣ ಮತ್ತು ಮಲೆನಾಡಿನ ಸಮಶೀತೋಷ್ಣ ಕಾಡುಗಳು ಕಡಿಮೆ ಪ್ರಮಾಣದ ಬೆಂಕಿ ಹಾನಿಗೆ ಒಳಗಾಗುತ್ತವೆ. ಈಶಾನ್ಯ ಭಾರತ, ಒಡಿಶಾ, ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ಗಢ ಮತ್ತು ಉತ್ತರಾಖಂಡದ ಕಾಡುಗಳು ನವೆಂಬರ್ನಿಂದ ಜೂನ್ ಅವಧಿಯಲ್ಲಿ ಬೆಂಕಿಗೆ ಹೆಚ್ಚು ಗುರಿಯಾಗುತ್ತವೆ.
2023 ರ ಮಾರ್ಚ್ನಲ್ಲಿ ಗೋವಾದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಉಂಟಾಗಿತ್ತು. ಅದು ಮಾನವ ನಿರ್ಮಿತ ಎಂಬುದು ತನಿಖೆಯಿಂದ ತಿಳಿಯಿತು. 2021 ರಲ್ಲೂ ವನ್ಯಜೀವಿ ಅಭಯಾರಣ್ಯಗಳು ಸೇರಿದಂತೆ ಉತ್ತರಾಖಂಡ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್-ಮಣಿಪುರ ಗಡಿ, ಒಡಿಶಾ, ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಸರಣಿ ಕಾಡ್ಗಿಚ್ಚುಗಳು ಸಂಭವಿಸಿದ್ದವು. ಆ ವರ್ಷದಲ್ಲಿ ದೊಡ್ಡ ಪ್ರಮಾಣದ ಕಾಡ್ಗಿಚ್ಚು ಇವಾಗಿದ್ದವು.
ಈ ವರ್ಷ ಕಾಡ್ಗಿಚ್ಚಿನ ಪರಿಸ್ಥಿತಿ ಹೇಗಿದೆ?
ಎಫ್ಎಸ್ಐ ಅಂಕಿಅಂಶಗಳ ಪ್ರಕಾರ ಕಳೆದ ಒಂದು ವಾರದಲ್ಲಿ, ಮಿಜೋರಾಂ (3,738), ಮಣಿಪುರ (1,702), ಅಸ್ಸಾಂ (1,652), ಮೇಘಾಲಯ (1,252), ಮತ್ತು ಮಹಾರಾಷ್ಟ್ರ (1,215) ನಲ್ಲಿ ಅತಿ ಹೆಚ್ಚು ಕಾಡ್ಗಿಚ್ಚುಗಳು ವರದಿಯಾಗಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿರುವ ಉಪಗ್ರಹದ ಮಾಹಿತಿ ಪ್ರಕಾರ, ಮಾರ್ಚ್ ಆರಂಭದಿಂದಲೂ ಮಹಾರಾಷ್ಟ್ರದ ಕೊಂಕಣ ಬೆಲ್ಟ್, ದಕ್ಷಿಣ ಕರಾವಳಿ ಗುಜರಾತ್, ಗಿರ್ ಸೋಮನಾಥ ಮತ್ತು ಪೋರ್ಬಂದರ್, ದಕ್ಷಿಣ ರಾಜಸ್ಥಾನ ಮತ್ತು ದಕ್ಷಿಣಕ್ಕೆ ಹೊಂದಿಕೊಂಡಂತೆ ಕಾಡ್ಗಿಚ್ಚು ಹೆಚ್ಚುತ್ತಿದೆ ಎಂದು ತೋರಿಸಿದೆ. ಮಧ್ಯಪ್ರದೇಶದ ಪಶ್ಚಿಮ ಜಿಲ್ಲೆಗಳು, ಕರಾವಳಿ ಮತ್ತು ಒಳಭಾಗ ಒಡಿಶಾ ಹಾಗೂ ಪಕ್ಕದ ಜಾರ್ಖಂಡ್ನಲ್ಲೂ ಕಾಡ್ಗಿಚ್ಚು ಸಂಭವಿಸಿದೆ. ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ಹೆಚ್ಚಿನ ಅರಣ್ಯ ಪ್ರದೇಶಗಳು ಕಳೆದ ವಾರದಲ್ಲಿ ಬೆಂಕಿಯ ದುರ್ಘಟನೆಗಳನ್ನು ಕಂಡಿವೆ.
ದಕ್ಷಿಣ ಭಾರತದಲ್ಲಿ ಹೇಗಿದೆ?
ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಅರಣ್ಯ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಎಫ್ಎಸ್ಐ ಪ್ರಕಾರ, ದಕ್ಷಿಣ ಭಾರತದಲ್ಲಿನ ಅರಣ್ಯಗಳು ಬೆಂಕಿಗೆ ಗುರಿಯಾಗುವುದು ಕಡಿಮೆ. ಏಕೆಂದರೆ, ಇಲ್ಲಿನ ಸಸ್ಯವರ್ಗದ ಪ್ರಕಾರವು ಮುಖ್ಯವಾಗಿ ನಿತ್ಯಹರಿದ್ವರ್ಣ ಅಥವಾ ಅರೆ-ನಿತ್ಯಹರಿದ್ವರ್ಣದ್ದಾಗಿದೆ. ತಮಿಳುನಾಡಿನ ಕಾಡುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡ್ಗಿಚ್ಚಿನ ವರದಿಗಳು ಹೆಚ್ಚಾಗಿವೆ.
ಈ ಬೆಂಕಿ ಅನಾಹುತಗಳಿಗೆ ಕಾರಣವೇನು?
ಕಾಡಿನ ಬೆಂಕಿಗೆ ಮಾನವ ನಿರ್ಮಿತ ಮತ್ತು ನೈಸರ್ಗಿಕ ಕಾರಣಗಳಿವೆ. ಬಿಸಾಡಿದ ಸಿಗರೇಟುಗಳು, ಕ್ಯಾಂಪ್ ಫೈರ್ಗಳು, ಭಗ್ನಾವಶೇಷಗಳನ್ನು ಸುಡುವುದು ಮತ್ತು ಇದೇ ರೀತಿಯ ಇತರ ಪ್ರಕ್ರಿಯೆಗಳಂತಹ ಮಾನವನ ಅಜಾಗರೂಕತೆಯ ಪರಿಣಾಮವಾಗಿ ಹೆಚ್ಚಿನ ಅರಣ್ಯ ಬೆಂಕಿಗಳು ಉಂಟಾಗುತ್ತವೆ. ನೈಸರ್ಗಿಕ ಕಾರಣಗಳಲ್ಲಿ ಮಿಂಚು ಸಾಮಾನ್ಯ ಮೂಲವಾಗಿದೆ.
ಕಾಡ್ಗಿಚ್ಚು ಹರಡಲು ಅನುಕೂಲಕರ ವಾತಾವರಣ ಬೇಕು. ಬಿಸಿ ಮತ್ತು ಶುಷ್ಕ ತಾಪಮಾನ, ಹೆಚ್ಚಿನ ಮರದ ಸಾಂದ್ರತೆಯು ಕಾಡಿನ ಬೆಂಕಿಯ ಹರಡುವಿಕೆಗೆ ಸಹಾಯ ಮಾಡುವ ಪ್ರಮುಖ ಅಂಶಗಳು. ಈ ವರ್ಷ ಹೆಚ್ಚಿನ ಶುಷ್ಕತೆ, ಸಾಮಾನ್ಯ ದಿನಕ್ಕಿಂತ ಹೆಚ್ಚಿನ ತಾಪಮಾನ, ಬೇಸಿಗೆಯ ಆರಂಭಿಕ ಹಂತದಲ್ಲಿ ಬಿಸಿ ಗಾಳಿಯು ದಕ್ಷಿಣ ಭಾರತದಲ್ಲಿ ಕಾಡ್ಗಿಚ್ಚಿನ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.
1901 ರ ಬಳಿಕ ಹೆಚ್ಚಿದ ತಾಪಮಾನ!
ಕಳೆದ ತಿಂಗಳು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅಸಾಧಾರಣ ಬಿಸಿ ವಾತಾವರಣ ಕಂಡುಬಂದಿದೆ. 1901 ರ ಬಳಿಕ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಈ ಪ್ರಮಾಣದ ಬಿಸಿ ವಾತಾವರಣದ ಅನುಭವವಾಗಿದೆ. ಕಳೆದ ಎರಡು ತಿಂಗಳಲ್ಲಿ ದಾಖಲಾದ ಗರಿಷ್ಠ, ಕನಿಷ್ಠ ಮತ್ತು ಸರಾಸರಿ ತಾಪಮಾನವು ದಕ್ಷಿಣದ ರಾಜ್ಯಗಳ ಮೇಲೆ ಸಾಮಾನ್ಯಕ್ಕಿಂತ ಹೆಚ್ಚಾಗಿವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಶಾಖದ ವಾತಾವರಣ ಉಂಟಾಗಲು ಇದು ಮುಖ್ಯ ಕಾರಣ.
ಆಂಧ್ರಪ್ರದೇಶದ ಪಶ್ಚಿಮ ಭಾಗ ಮತ್ತು ನೆರೆ ರಾಜ್ಯ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವಾರ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಿತ್ತು. ಮಳೆಯ ಕೊರತೆ ಮತ್ತು ಹೆಚ್ಚಿನ ತಾಪಮಾನದ ಕಾರಣದಿಂದಾಗಿ ದಕ್ಷಿಣ ಭಾರತದಲ್ಲಿ ಶಾಖದ ವಾತಾವರಣ ಇರಲಿದೆ ಎಂದು ಹೇಳಿದೆ.
ಬಿಆರ್ಟಿಯಲ್ಲಿ 50 ಎಕರೆ ಬೆಂಕಿಗಾಹುತಿ
ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಚೆಗೆ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಸುಮಾರು 50 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಪುಣಜನೂರಿನಿಂದ ಬೇಡಗುಳಿಗೆ ಹೋಗುವ ರಸ್ತೆಯ ವ್ಯಾಪ್ತಿಯ ಕುರಿಮಂದೆ, ಕುಂಬಳಕಾಯಿ ಗುಡ್ಡ ಪ್ರದೇಶದ ಮೂರ್ನಾಲ್ಕು ಕಡೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಧಗಿಸುತ್ತಿದ್ದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.