ಬಳ್ಳಾರಿ: ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಸುದ್ದಿಯಾಗ್ತಿರೋ ಬಳ್ಳಾರಿಯಲ್ಲಿ ಇದೀಗ ಮತ್ತೊಂದು ಅಕ್ರಮ ನಡೆದಿದೆ. ಬಳ್ಳಾರಿ ವಿಎಸ್ಕೆ ವಿವಿ ನೇಮಕಾತಿಯಲ್ಲಿ ಗೋಲ್ಮಾಲ್ ನಡೆದಿದೆ.
ವಿಶ್ವ ವಿದ್ಯಾಲಯದ ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಬೇಕಾದ ಕುಲಪತಿ ಹಾಗೂ ಆಡಳಿತ ವಿಭಾಗದ ಕುಲಸಚಿವರೇ ತಮ್ಮ ಸಂಬಂಧಿಕರಿಗೆ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ಕೊಡಿಸಲು ವಿವಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.
ವಿಶ್ವ ವಿದ್ಯಾಲಯದ ಕುಲಪತಿ ಎಂ ಎಸ್ ಸುಭಾಷ್ ರ ಅಳಿಯ ರಮೇಶ್ ಚಂದ್ರಹಾಸ ಹಾಗೂ ಆಡಳಿತ ಕುಲಸಚಿವ ಎಸ್ಎ ಪಾಟೀಲರ ಪುತ್ರ ಸಂತೋಷ್ ಪಾಟೀಲ ನಿಯಮ ಉಲ್ಲಂಘಿಸಿ ಪರೀಕ್ಷೆ ಬರೆದಿರುವುದು ಇದೀಗ ಬಯಲಾಗಿದೆ. ಕುಲಪತಿ ಹಾಗೂ ಆಡಳಿತ ಕುಲಸಚಿವರು ನಡೆಸಿದ ಅಕ್ರಮದ ವಿರುದ್ಧ ಇದೀಗ ಮೌಲ್ಯಮಾಪನ ಕುಲಸಚಿವರೇ ತಕರಾರು ತಗೆದಿದ್ದಾರೆ.
ಪೊಲೀಸ್ ಪೇದೆಯಿಂದ ಹಿಡಿದು ಉನ್ನತ ಹುದ್ದೆಗಳ ನೇಮಕಾತಿ ವೇಳೆ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನಕಲು ಪ್ರತಿ ನೀಡಲಾಗುತ್ತೆ. ಆದ್ರೆ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಯ ನೇಮಕಾತಿ ವೇಳೆ ಕುಲಪತಿಗಳು ಹಾಗೂ ಆಡಳಿತ ವಿಭಾಗದ ಕುಲಸಚಿವರ ಸಂಬಧಿಕರಿಗೆ ಅನೂಕೂಲ ಮಾಡಿಕೊಡುವ ಸಲುವಾಗಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ಓಎಂಆರ್ ಕಾರ್ಬನ್ ಕಾಫಿ ನೀಡಿರಿಲಿಲ್ಲ. ಅಲ್ಲದೇ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಸೀಡ್ ಕವರ್ನಲ್ಲಿ ತರದೇ ಓಪನ್ ಕವರ್ನಲ್ಲಿದ್ದ ಪ್ರಶ್ನೆ ಪ್ರತಿಕೆಗಳನ್ನು ಪರೀಕ್ಷಾರ್ಥಿಗಳಿಗೆ ನೀಡಿರುವುದು ಅಕ್ರಮವೆಂದು ಮೌಲ್ಯಮಾಪನ ಕುಲಸಚಿವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಪರೀಕ್ಷಾ ವಿಭಾಗವನ್ನು ಪರಿಗಣಿಸದೆ ನಿಯಮ ಮೀರಿ ನೇಮಕಾತಿ ನಡೆಸಿರುವ ಬಗ್ಗೆ ಮೌಲ್ಯಮಾಪನ ಕುಲಸಚಿವ ಹೊನ್ನೂ ಸಿದ್ದಾರ್ಥ, ರಾಜ್ಯಪಾಲರಿಗೆ ಬರೆದಿರುವ ಪತ್ರ ಇದೀಗ ಪಬ್ಲಿಕ್ ಟಿವಿ ಲಭ್ಯವಾಗಿದೆ. ಲಿಖಿತವಾಗಿ ದೂರು ಸಲ್ಲಿಕೆ ಮಾಡಿರುವ ಮೌಲ್ಯಮಾಪನ ಕುಲಸಚಿವರು ಅಕ್ರಮ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ನೇಮಕಾತಿಗಳ ನಿಯಮದಡಿಯಲ್ಲಿ ಅರ್ಹತೆಯಿದ್ದವರು ಯಾರೂ ಬೇಕಾದ್ರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆದ್ರೆ ಸಂಬಧಿಕರಿಗೆ ಉದ್ಯೋಗ ಕೊಡಿಸಲು ಓಎಂಆರ್ ನಕಲು ಪ್ರತಿಗಳನ್ನ ನೀಡದಿರುವುದು ಹಾಗೂ ತೆರದ ಕವರ್ನಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾರ್ಥಿಗಳಿಗೆ ವಿತರಣೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಆಡಳಿತ ವಿಭಾಗದ ಕುಲಸಚಿವರು ಹಾಗೂ ಕುಲಪತಿಗಳು ತಮ್ಮ ಸಂಬಂಧಿಕರನ್ನು ನೇಮಕಾತಿ ಮಾಡಲು ನಡೆಸಿದ ಈ ಅಕ್ರಮದ ಬಗ್ಗೆ ತನಿಖೆ ಸ್ವಂತ ಮೌಲ್ಯಮಾಪನ ಕುಲಸಚಿವರೇ ತಕರಾರು ತಗೆದು ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದರಿಂದ ಅಕ್ರಮ ನೇಮಕಾತಿ ಪ್ರಕರಣ ಇದೀಗ ವಿವಾದ ಸೃಷ್ಠಿ ಮಾಡಿದಂತಾಗಿದೆ. ಈ ಬಗ್ಗೆ ರಾಜ್ಯಪಾಲರು ಎನೂ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.