ಮೈಸೂರು: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಂದು ಬಿಜೆಪಿ ಬಹುಮತ ಪಡೆಯುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಶುಕ್ರವಾರದಂದು ಹಾಸನದಲ್ಲಿ ಗೆಲುವು ಸಾಧಿಸಿರುವ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಇದೀಗ ಪರಿಷತ್ ಸದಸ್ಯ ಧರ್ಮಸೇನಾ ಅವರು ಚಾಮರಾಜನಗರದ ಮಾಜಿ ಸಂಸದ ಧ್ರುವನಾರಾಯಣ್ ಅವರಿಗಾಗಿ ತನ್ನ ಸ್ಥಾನವನ್ನು ಬಿಟ್ಟು ಕೊಡಲು ನಾನು ಸಿದ್ಧ ಎಂದು ಹೇಳಿದ್ದಾರೆ.
- Advertisement 2
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧ್ರುವನಾರಾಯಣ್ ಅವರು, ಅಲ್ಪ ಮತಗಳಿಂದ ಸೋಲನ್ನ ಅನುಭವಿಸಿದ್ದಾರೆ. ಇದು ಸೋಲಲ್ಲ, ಹೋರಾಡಿ ಗೆದ್ದದ್ದು. ಧ್ರುವನಾರಾಯಣ್ ದೇಶದ ಉತ್ತಮ ಸಂಸದರು. ಧ್ರುವನಾರಾಯಣ್ ಅವರ ನಾಯಕತ್ವದ ಅವಶ್ಯಕತೆ ಇದೆ. ಇಂತಹ ವ್ಯಕ್ತಿಗಾಗಿ ನಾನು ನನ್ನ ಸ್ಥಾನ ನೀಡಲು ಸಿದ್ಧ. ಇದು ನನ್ನ ವೈಯಕ್ತಿಕವಾದ ನಿರ್ಧಾರ. ಈ ವಿಚಾರ ಇನ್ನು ಯಾರಿಗೂ ಹೇಳಿಲ್ಲ, ಆದರೆ ಈಗ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದು ತಿಳಿಸಿದರು.
- Advertisement 3
- Advertisement 4
ನನ್ನ ಅವಶ್ಯಕತೆ ಇರಬಹುದು, ಆದರೆ ಅದಕ್ಕಿಂತ ಹೆಚ್ಚು ಧ್ರುವನಾರಾಯಣ್ ಅವರ ಅವಶ್ಯಕತೆಯಿದೆ. ನನ್ನ ಹುದ್ದೆ ಕೂಡ, ಮೈಸೂರು ಚಾಮರಾಜನಗರದ ಜನ ಆರಿಸುವಂತದ್ದು. ಇದು ಎರಡು ಜಿಲ್ಲೆಗಳ ಜನರಿಂದ ಆಯ್ಕೆಯಾಗುವಂತ ದೊಡ್ಡ ಸ್ಥಾನ. ಈ ವಿಚಾರದಲ್ಲಿ ಯಾವುದೇ ದುರುದ್ದೇಶ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಧ್ರುವನಾರಾಯಣ್ ತರಹದ ನಾಯಕರು ಬೇಕು. ಸಂಕಷ್ಟದ ಸಮಯದಲ್ಲಿ ನಾನು ನೆರವಾಗಬೇಕೆಂದು ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ 5,68,537 ಮತಗಳನ್ನು ಪಡೆದು 1,817 ಮತಗಳ ಅಂತರದಲ್ಲಿ ಧ್ರುವನಾರಾಯಣ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆರ್. ಧ್ರುವನಾರಾಯಣ್ 5,66,720 ಮತಗಳನ್ನು ಗಳಿಸಿದ್ದರೆ, ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್ 87,208 ಮತಗಳನ್ನು ಪಡೆದಿದ್ದಾರೆ.