ಮಂಗಳೂರು: ಬಿಜೆಪಿಯಿಂದ ನನಗೆ ವಿಪರೀತ ಒತ್ತಡ ಬಂದಿದೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜು ಗೌಡ ಆಪರೇಶನ್ ಕಮಲದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಶಾಸಕ ರಾಜು ಗೌಡ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ದೂರವಾಣಿ ಮೂಲಕ ರಾಜು ಗೌಡ ಅವರನ್ನು ಸಂಪರ್ಕಿಸಿದ್ದಾರೆ.
ಈ ಬಗ್ಗೆ ರಾಜು ಗೌಡ ಮಾತನಾಡಿ, ರಾಜಕಾರಣದಲ್ಲಿ ಹಣ, ಅಧಿಕಾರ ಮುಖ್ಯ ಅಲ್ಲ. ಜನರಿಗೆ ಸೇವೆ ಮಾಡುವುದು ಮುಖ್ಯ. ನಾವು ಸೇವೆ ಮಾಡುವ ದೃಷ್ಟಿಯಿಂದ ರಾಜಕಾರಣಕ್ಕೆ ಬಂದಿದ್ದೇವೆ ಹೊರತು ಹಣ, ಅಧಿಕಾರಕ್ಕೆ ಬಂದಿಲ್ಲ. ಒಂದು ಪಕ್ಷದಲ್ಲಿ ನಾವು ಗೆದ್ದ ಮೇಲೆ ಆ ಪಕ್ಷದ ಋಣ ತೀರಿಸಬೇಕಿರುವುದು ನಮ್ಮ ಕರ್ತವ್ಯ. ಏಕೆಂದರೆ ನಮ್ಮನ್ನು ನಂಬಿ ಟಿಕೆಟ್ ನೀಡುತ್ತಾರೆ. ಟಿಕೆಟ್ ನೀಡಬೇಕು ಎಂದರೆ ಅವರಿಗೆ ಒತ್ತಡ ಇರುತ್ತದೆ. ಬಹಳಷ್ಟು ಆಕಾಂಕ್ಷಿಗಳು ಇರುತ್ತಾರೆ. ಅಂತಹದರಲ್ಲಿ ಅವರು ನಮ್ಮನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತಾರೆ.
ನಾನು ಮೊದಲ ಬಾರಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆಗೆ ಹೋಗಿದ್ದೇನೆ. ನನ್ನನ್ನು ಮಲೆನಾಡ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿಯೂ ಮಾಡಿದ್ದಾರೆ. ನಾನು ಅಲ್ಲಿಯೂ ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಸಿಎಂ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಡಿಸಿಎಂ ಎಲ್ಲರೂ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ್ದಾರೆ. ಶಾಸಕರು ಚರ್ಚೆ ಮಾಡಿ ತೀರ್ಮಾನ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಏಕಾಏಕಿಯಾಗಿ ರಾಜೀನಾಮೆ ನೀಡಿ ಸರ್ಕಾರವನ್ನು ಅಭದ್ರಗೊಳಿಸುವುದು ಪ್ರಜಾಪ್ರಭ್ವುತ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂದರು.
ನನಗೂ ಎಲ್ಲರಿಂದಲೂ ಸಾಕಷ್ಟು ಒತ್ತಡ ಬಂದಿದೆ. ನಾನು ಅವರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ನನಗೆ ತಡೆಯೋಕ್ಕಾಗದಷ್ಟು ಒತ್ತಡ ನೀಡಿ ಆಮೀಷವೊಡ್ಡಿದ್ದರು. ಆದರು ಕೂಡ ನಾನು ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ನಮ್ಮ ಹೈಕಮಾಂಡ್ ಸೋನಿಯಾ ಗಾಂಧಿ ಅವರು ತ್ಯಾಗಿಮಯಿ. ಏಕೆಂದರೆ ಅವರಿಗೆ ಪ್ರಧಾನಿ ಆಗುವ ಅವಕಾಶ ಇತ್ತು. ಅವರು ಆರಾಮಾಗಿ ಪ್ರಧಾನಿ ಆಗಬಹುದಿತ್ತು. ಆ ಸಮಯದಲ್ಲಿ ವಿದೇಶಿ ಎಂದು ಹೇಳಿದ್ದ ಕಾರಣ ಸೋನಿಯಾ ತಮ್ಮ ಹುದ್ದೆಯನ್ನು ತ್ಯಾಗ ಮಾಡಿದ್ದರು. ಆಗ ಅವರು ಮನ್ಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದ್ದರು ಎಂದು ರಾಜು ಗೌಡ ತಿಳಿಸಿದರು.