ಮೈಸೂರು: ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡುವಂತೆ ಪತಿಯೇ ಪತ್ನಿ ಮೇಲೆ ಒತ್ತಡ ಹೇರಿ ಕಿರುಕುಳ ನೀಡುತ್ತಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಎಚಗುಡ್ಲ ಗ್ರಾಮದ ಅಯ್ಯಪ್ಪ ಎಂಬಾತನೇ ತನ್ನ ಪತ್ನಿ ರತ್ನಮ್ಮಗೆ ಈ ರೀತಿ ಕಿರುಕುಳ ನೀಡುತ್ತಿರುವ ಪತಿ. ಮೈಸೂರು ತಾಲೂಕಿನ ಉದ್ಭೂರು ಗ್ರಾಮದ ರತ್ನಮ್ಮ, ಎಚಗುಂಡ್ಲ ಗ್ರಾಮದ ಅಯ್ಯಪ್ಪನನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಂದು ಮಗುವಿನ ತಂದೆಯಾದ ಅಯ್ಯಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಆಗಾಗ ಅಯ್ಯಪ್ಪ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಅಪರಿಚಿತರನ್ನು ಮನೆಗೆ ಕರೆತಂದು ಸತ್ಕಾರ ಮಾಡುವ ನೆಪದಲ್ಲಿ ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡುವ ಪ್ಲಾನ್ ಮಾಡಿದ್ದ. ಅದಕ್ಕೆ ಪತ್ನಿಯನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದ.
ಇದಕ್ಕೆ ಪತ್ನಿ ಒಪ್ಪದ ಕಾರಣ ಆಕೆಯ ಮೇಲೆಯೇ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸಲು ಮುಂದಾಗಿದ್ದ. ಇದರಿಂದ ಹೆದರಿದ ರತ್ನಮ್ಮ ತವರು ಮನೆ ಸೇರಿದ್ದರು. ಗ್ರಾಮದ ಮುಖಂಡರಿಂದ ನ್ಯಾಯ ಸಿಗದ ಕಾರಣ ರತ್ನಮ್ಮ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಕುಡುಕ ಪತಿಯಿಂದ ರಕ್ಷಣೆ ನೀಡಿ ತನ್ನ ಮಗುವನ್ನು ಕೊಡಿಸುವಂತೆ ಅಳಲು ತೋಡಿಕೊಂಡಿದ್ದಾರೆ.