ಹುಬ್ಬಳ್ಳಿ: ಲಾರಿ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಹೊತ್ತಿ ಉರಿದ ಘಟನೆ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರಾತ್ರಿ 9.30 ರ ಸುಮಾರಿಗೆ ನಡೆದಿದೆ.
ಲಾರಿ ಹಾಗೂ ಟಿಪ್ಪರ್ ಗೆ ಮುಖಾಮುಖಿ ಡಿಕ್ಕಿ ಸಂಭವಿಸುತ್ತಿದ್ದಂತೆ ಡಿಸೇಲ್ ಟ್ಯಾಂಕ್ ಗೆ ಬೆಂಕಿ ಹೊತ್ತಿದ ಪರಿಣಾಮ ಟಿಪ್ಪರ್ ನಲ್ಲಿ ಇದ್ದ ಚಾಲಕ ವಾಹನದಲ್ಲೇ ಸಜೀವ ದಹನವಾಗಿದ್ದಾನೆ. ಚಾಲಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಾರಿಯಲ್ಲಿನ ಚಾಲಕ ಮತ್ತು ಕ್ಲೀನರ್ ಅಪಘಾತ ಸಂಭವಿಸುತ್ತಿದ್ದಂತೆ ಇಳಿದು ಓಡಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಚರಣೆ ಮಾಡಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳದಲ್ಲೇ ಬಿಡು ಬಿಟ್ಟಿದ್ದಾರೆ. ಲಾರಿ ಹಾಗೂ ಟಿಪ್ಪರ್ ನಲ್ಲಿ ಏನಿದ್ದವು ಎಂಬುದು ಗೊತ್ತಾಗಿಲ್ಲ. ಎಲ್ಲಿಯ ವಾಹನಗಳಿವು ಎಲ್ಲಿಗೆ ಹೋಗುತ್ತಿದ್ದವು ಎಂಬ ಮಾಹಿತಿಯು ತಿಳಿದಿಲ್ಲ.
ಈ ಸಂಬಂಧ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.