ಹುಬ್ಬಳ್ಳಿ: ಶನಿವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತ, ಪ್ರಚೋದಿತ ಎಂಬುದು ಸ್ಪಷ್ಟವಾಗುತ್ತಿದೆ. ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಮತ್ತಷ್ಟು ದೃಶ್ಯಗಳು ಹೊರಬಂದಿದ್ದು, ಅದರಲ್ಲಿ ಕಿಡಿಗೇಡಿಗಳು ಬಳಸಿದ ಪದಗಳು, ತೋರಿದ ರೋಷಾವೇಶಗಳೆಲ್ಲಾ ಗಲಭೆಗೆ ಪ್ರಚೋದನೆ ನೀಡುವಂತೆ ಇರೋದು ಸ್ಪಷ್ಟವಾಗಿದೆ.
ಉದ್ರಿಕ್ತರಂತೂ, ಪ್ರವಾದಿಗೆ ಅಪಮಾನ ಮಾಡಿದವನನ್ನು ನಮಗೆ ಒಪ್ಪಿಸಿ, ರುಂಡ ಚೆಂಡಾಡ್ತೀವಿ. ಶಿರಚ್ಛೇದ ಮಾಡ್ತೀವಿ ಎಂದು ಅಬ್ಬರಿಸಿದ್ರೆ, ಇನ್ನೂ ಕೆಲವರು ಸಮಾಧಾನ ಮಾಡಲು ನೋಡಿದ್ದಾರೆ. ಅವರ ಮೇಲೆ ಎಫ್ಐಆರ್ ಆಗಿದ್ಯಪ್ಪಾ ಅರೆಸ್ಟ್ ಆಗಿದ್ದಾನೆ. ನಡೀರಿ ಇಲ್ಲಿಂದ ಹೋಗೋಣ ಎಂದು ಹೇಳಿದ್ರೂ, ಕೇಳದ ಉದ್ರಿಕ್ತರು, ಅವನು ಮೂರೇ ತಿಂಗಳಲ್ಲಿ ಬೇಲ್ ಪಡೆದು ಹೊರಗೆ ಬರ್ತಾನೆ. ಅವನನ್ನ ಹೊರಗೆ ಕರೆಸಿ. ನಾವೇ ನೋಡಿಕೊಳ್ತೇವೆ ಎನ್ನುತ್ತಾರೆ.
ಎಫ್ಐಆರ್ ಆದ್ಮೇಲೆ ಮುಗೀತು.. ನಡೀರಿ.. ನಡೀರಿ ಅಂದ್ರೆ, ಇಲ್ಲ ನಾವಿಲ್ಲಿ ಕೂತ್ಕೋತೇವೆ.. ಎನ್ನುತ್ತಾ ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗುತ್ತಾರೆ. ಇಷ್ಟಕ್ಕೆ ಸೀಮಿತವಾಗದ ಆಕ್ರೋಶಿತರು, ಆರ್ಎಸ್ಎಸ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.. ಇಷ್ಟೆಲ್ಲಾ ಪ್ರಚೋದನಾಕಾರಿ ಬೆಳವಣಿಗೆ ಆದ್ಮೇಲೆ, ಠಾಣೆ, ದೇಗುಲ, ಆಸ್ಪತ್ರೆಗಳನ್ನು ಟಾರ್ಗೆಟ್ ಮಾಡಿದ ಕಿಡಿಗೇಡಿಗಳ ಗುಂಪು ದಾಂಧಲೆ ಎಬ್ಬಿಸಿದೆ. ಮೌಲ್ವಿಯ ಮತ್ತೊಂದು ವಿಡಿಯೋ ಕೂಡ ರಿಲೀಸ್ ಆಗಿದೆ. ಈ ಗಲಭೆ ಹಿಂದೆ ದೊಡ್ಡ ಷಡ್ಯಂತ್ರ್ಯವೇ ಇದೆ ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದಾರೆ.
ಇತ್ತ ಗಲಭೆ ಕೇಸ್ ತನಿಖೆ ತೀವ್ರಗೊಂಡಿದೆ. ಸೋಮವಾರ ಮತ್ತು ಇಂದು ಬಂಧಿಸಲ್ಪಟ್ಟ 19 ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಪೈಕಿ ಆರು ಮಂದಿ ರೌಡಿ ಶೀಟರ್ಗಳು ಇದ್ದಾರೆ. ಪೊಲೀಸ್ ಕಾರ್ ಮೇಲೆ ನಿಂತು ಪ್ರಚೋದನಾಕಾರಿ ಭಾಷಣ ಮಾಡಿದ್ದ ಎನ್ನಲಾದ ಮೌಲ್ವಿ ವಾಸೀಂ ಗಲಭೆಯ ಮಾಸ್ಟರ್ ಮೈಂಡ್ ಎಂಬ ಮಾತು ಕೇಳಿಬಂದಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ – ಬಂಧಿತ ಆರೋಪಿಗಳು ಕಲಬುರಗಿ ಜೈಲಿಗೆ ಶಿಫ್ಟ್
ಕಳೆದ ಮೂರು ದಿನಗಳಿಂದ ತಲೆ ಮರೆಸಿಕೊಂಡಿರೋ ಮೌಲ್ವಿ ಪತ್ತೆಗೆ ಶಿಗ್ಗಾಂವಿ, ಬೆಳಗಾವಿನಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಮೌಲ್ವಿ 8 ಕಿಡಿಗೇಡಿಗಳ ಜೊತೆ ಆ ಮೌಲ್ವಿ ಹೈದ್ರಾಬಾದ್ಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಹೀಗಾಗಿ ವಾಸಿಂ ಎಲ್ಲೇ ಇದ್ರೂ ನಾಳೆಯೊಳಗೆ ಸರೆಂಡರ್ ಆಗ್ಬೇಕು.. ಇಲ್ಲದೇ ಹೋದ್ರೇ ಮುಂದಾಗೋ ಪರಿಣಾಮಗಳಿಗೆ ಆತನೇ ಜವಾಬ್ದಾರಿ ಆಗ್ತಾನೆ ಎಂದು ಮೌಲ್ವಿ ಕುಟುಂಬಸ್ಥರಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಇನ್ನು ಇವತ್ತು ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಈ ವೇಳೆ ಪೋಷಕರು, ನಮ್ಮ ಮಕ್ಕಳನ್ನು ಬಿಡಿ ಎಂದು ಕಣ್ಣೀರು ಇಟ್ಟಿದ್ದಾರೆ.
ಈ ಮಧ್ಯೆ ಬಂಧಿತರ ಬಿಡುಗಡೆಗೆ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದ ವಿಷಯ ತಿಳಿದ ಪೊಲೀಸರು, ಎಲ್ಲಾ 90 ಆರೋಪಿಗಳನ್ನು ದಿಢೀರ್ ಕಲಬುರಗಿ ಜೈಲ್ಗೆ ಶಿಫ್ಟ್ ಮಾಡಿದ್ದಾರೆ. ಅತ್ತ ಅಮಾಯಕರ ಬಂಧನ ಮಾಡಿಲ್ಲ ಎನ್ನುವ ಮೂಲಕ ಸಿಎಂ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್