ಶಿಮ್ಲಾ: ಕಳೆದ ಕೆಲ ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ (Himachal Pradesh Rain) ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದ್ದು, ಸುಮಾರು 10 ಸಾವಿರ ಕೋಟಿ ನಷ್ಟವಾಗಿದೆ. ಈ ಮಾನ್ಸೂನ್ನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಮರುನಿರ್ಮಾಣ ಮಾಡಲು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ರಣ ಮಳೆಯಿಂದ ಅಲ್ಲಲ್ಲಿ ಭೂಕುಸಿತ (Landslides) ಉಂಟಾಗುತ್ತಿದೆ. ಸಮ್ಮರ್ ಹಿಲ್ನಲ್ಲಿರುವ ಶಿವ ದೇವಾಲಯದಲ್ಲಿ ಭೂಕುಸಿತ ಹಾಗೂ ಶಿಮ್ಲಾದಲ್ಲಿ ಸಂಭವಿಸಿದ ಮೂರು ಭೂಕುಸಿತಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 24 ರಂದು ಆರಂಭವಾದ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 217 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ. ಎಂಟು ಮಂದಿ ಇನ್ನೂ ದೇವಾಲಯದ ಅವಶೇಷಗಳಲ್ಲಿ ಸಮಾಧಿಯಾಗಿರುವ ಶಂಕೆ ಇದೆ.
ಮುಂಗಾರು ಆರಂಭವಾದ 55 ದಿನಗಳಲ್ಲಿ ರಾಜ್ಯದಲ್ಲಿ 113 ಕಡೆ ಭೂಕುಸಿತ ಉಂಟಾಗಿದ್ದು ಲೋಕೋಪಯೋಗಿ ಇಲಾಖೆಗೆ (PWD) 2,491 ಕೋಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) 1,000 ಕೋಟಿ ನಷ್ಟವಾಗಿದೆ. ಅಲ್ಲದೇ ನಿರಂತರ ಮಳೆಯಿಂದ ರಾಜ್ಯದಲ್ಲಿ ತೀವ್ರ ಹಾನಿಯುಂಟಾಗಿದ್ದು, ಒಟ್ಟು ರಾಜ್ಯಾದ್ಯಂತ 10 ಸಾವಿರ ಕೋಟಿಯಷ್ಟು ಸಂಪತ್ತು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಿಮಾಚಲ, ಉತ್ತರಾಖಂಡದಲ್ಲಿ ಮಳೆಗೆ 81 ಸಾವು – ಪಂಜಾಬ್ನಲ್ಲಿ ಪ್ರವಾಹ ಪರಿಸ್ಥಿತಿ
ಇನ್ನೂ ಮೂರು ದಿನ ಮಳೆ:
ಹಿಮಾಚಲ ಪ್ರದೇಶದಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ. ಶಿಮ್ಲಾ, ಸೋಲನ್, ಮಂಡಿ, ಚಂಬಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ. ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಮುಸ್ಲಿಮರು ಮೊದಲು ಹಿಂದುಗಳಾಗಿದ್ದರು, ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು: ಗುಲಾಂ ನಬಿ ಆಜಾದ್
ಪ್ರವಾಸೋದ್ಯಮಕ್ಕೂ ನಷ್ಟ:
ರಣಭೀಕರ ಮಳೆ ರಾಜ್ಯದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಮಳೆಯಿಂದಾಗಿ ಪ್ರವಾಸೋದ್ಯಮ ಹಾಗೂ ಸೇಬು ವ್ಯಾಪಾರದ ಮೇಲೂ ಪರಿಣಾಮ ಬೀರಲಿದೆ. ದಿನಕ್ಕೆ 2 ಸಾವಿರ ರೂ. ಗಳಿಸುತ್ತಿದ್ದ ಟ್ಯಾಕ್ಸಿ ಚಾಲಕರು ಕೇವಲ 200 ರೂ. ಅಷ್ಟೇ ಸಂಪಾದಿಸುತ್ತಿದ್ದಾರೆ. ಮಳೆ ಹೀಗೆ ಮುಂದುವರಿದರೆ ರಾಜ್ಯದ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಹಿಮಾಚಲ ಪ್ರದೇಶ ಸಿಎಂ ಸುಖ್ವೀರ್ ಸಿಂಗ್ ಸುಕು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂಗ್ರಾ ಜಿಲ್ಲೆಯ ಫತೇಪುರ್ ಮತ್ತು ಇಂದೋರಾದ ಪಾಂಗ್ ಡ್ಯಾಮ್ನಲ್ಲಿ ಪ್ರವಾಹ ಪೀಡಿತ ಪ್ರದೇಶದಿಂದ ಭಾರತೀಯ ಸೇನೆ, ವಾಯುಪಡೆ ಮತ್ತು ಇತರ ರಕ್ಷಣಾ ಸಿಬ್ಬಂದಿ 309 ಜನರನ್ನು ಸ್ಥಳಾಂತರಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಈ ಪ್ರದೇಶಗಳಿಂದ 2074 ಜನರನ್ನು ಸ್ಥಳಾಂತರಿಸಲಾಗಿದೆ.
Web Stories