ರಾಯಚೂರು: ಜಿಲ್ಲೆಯಾದ್ಯಂತ(Raichur District) ಶನಿವಾರ ತಡರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ (Rain) ಜಿಲ್ಲೆಯ ಹಲವು ಭಾಗಗಳು ತತ್ತರಿಸಿದ್ದು, ಸಿಡಿಲು ಬಡಿದು ತೆಂಗಿನಮರ ಭಸ್ಮವಾಗಿರುವ ಘಟನೆ ಹಾಗೂ ಮಂತ್ರಾಲಯದಲ್ಲಿ(Mantralayam) ಭಕ್ತರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಸಂಗಗಳು ವರದಿಯಾಗಿವೆ.
ಜಿಲ್ಲೆಯ ಅರಕೇರಾ ತಾಲೂಕಿನ ಮುಕ್ಕಲಗುಡ್ಡ ತಾಂಡಾದಲ್ಲಿ ರಾತ್ರಿ ವೇಳೆ ಭೀಕರ ಸಿಡಿಲು ಬಡಿದಿದೆ. ತಾಂಡಾದ ನಿವಾಸಿ ಮನೋಹರ್ ನಾಯ್ಕ್ ಎಂಬುವರ ಮನೆ ಮುಂದೆ ಇದ್ದ ತೆಂಗಿನಮರಕ್ಕೆ ಏಕಾಏಕಿ ಸಿಡಿಲು ಬಡಿದ ಪರಿಣಾಮ, ಮರದಲ್ಲಿದ್ದ ತೆಂಗಿನಕಾಯಿಗಳು ಹಾಗೂ ಮರದ ಗರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಸಿಡಿಲು ಬಡಿದ ರಭಸಕ್ಕೆ ಮರ ಹೊತ್ತಿ ಉರಿದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಇದು ದಟ್ಟವಾದ ಜನವಸತಿ ಪ್ರದೇಶವಾಗಿದ್ದರೂ ಸಹ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಇಡೀ ತಾಂಡಾ ದೊಡ್ಡ ಅನಾಹುತದಿಂದ ಪಾರಾಗಿದೆ. ಇದನ್ನೂ ಓದಿ: ಮಳೆ | ಇಂದು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಮಂತ್ರಾಲಯದಲ್ಲಿ ಮಳೆಯ ಅಬ್ಬರ
ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂತ್ರಾಲಯದಲ್ಲೂ ಸಹ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ರಾಯರ ದರ್ಶನಕ್ಕೆ ಶ್ರೀಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.
ಜಾಗದ ಅಭಾವದಿಂದಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಹೊರಪ್ರಾಂಗಣದಲ್ಲಿ ನೂರಾರು ಭಕ್ತರು ಮಲಗಿದ್ದರು. ತಡರಾತ್ರಿ ಏಕಾಏಕಿ ಮಳೆ ಆರಂಭವಾದ ಪರಿಣಾಮ, ಮಲಗಿದ್ದ ಭಕ್ತರು ದಿಕ್ಕಾಪಾಲಾಗಿ ಓಡುವಂತಾಯಿತು. ಮಳೆಯಲ್ಲಿ ಸಂಪೂರ್ಣವಾಗಿ ನೆನೆದು ಕಂಗಾಲಾಗಿದ್ದ ಭಕ್ತರು, ಸಣ್ಣ ಮಕ್ಕಳು ಹಾಗೂ ವೃದ್ಧರೊಂದಿಗೆ ತೀವ್ರ ಪರದಾಟ ನಡೆಸಿದರು.
ಹೊರಪ್ರಾಂಗಣದಲ್ಲಿ ಭಕ್ತರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ತಡರಾತ್ರಿಯೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿದರು. ಮಳೆಯಲ್ಲಿ ನೆನೆಯುತ್ತಿದ್ದ ಭಕ್ತರ ಕಷ್ಟಕ್ಕೆ ತಕ್ಷಣವೇ ಸ್ಪಂದಿಸಿದ ಶ್ರೀಗಳು, ಮಠದ ಕಲ್ಯಾಣ ಮಂಟಪಗಳ ಬಾಗಿಲುಗಳನ್ನು ತೆರೆಯಿಸಿ ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.
