ಚಿಕ್ಕಮಗಳೂರು: ಮೂರು ದಿನಗಳಿಂದ ದಿನ ಕಳೆದಂತೆ ಮಳೆ ಪ್ರಮಾಣ ಜಾಸ್ತಿ ಆಗುತ್ತಿದೆ. ಭಾರೀ ಮಳೆ-ಗಾಳಿಯಿಂದ ಮಲೆನಾಡಿಗರ ಆತಂಕ ಹೆಚ್ಚಾಗಿದ್ದು, ಶಬ್ದಕ್ಕೆ ಹೆದರಿ ಮಾಲೀಕ ಮನೆ ಖಾಲಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕಮಕಿ ಗ್ರಾಮದ ಪ್ರಶಾಂತ್ ಎಂಬವರು ಭೂಮಿಯೊಳಗಿನ ಕೇಳಿ ಬಂದ ಶಬ್ದಕ್ಕೆ ಹೆದರಿ ಮನೆ ಖಾಲಿ ಮಾಡಿದ್ದಾರೆ. ಇಂದು ಬೆಳಗ್ಗೆ ಸುಮಾರು 4.45ಕ್ಕೆ 2-3 ಸೆಕೆಂಡ್ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದಿದೆ. ಈ ಶಬ್ದಕ್ಕೆ ಹೆದರಿದ ಮಾಲೀಕ ಪ್ರಶಾಂತ್ ಅವರು ತಮ್ಮ ಕುಟುಂಬದ ಜೊತೆ ಮನೆ ಖಾಲಿ ಮಾಡಿ ಮೂಡಿಗೆರೆಗೆ ಬಂದಿದ್ದಾರೆ.
ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಬೀಸುತ್ತಿರುವ ರಣಗಾಳಿಗೆ ಮಲೆನಾಡಿಗರು ಊರು ಬೀಡುವಂತೆ ಮಾಡುತ್ತಿದೆ. ಮೂಡಿಗೆರೆ ತಾಳೂಕಿನ ಚನ್ನಹಡ್ಲು, ಬಾಳೂರು, ಸುಂದರಬೈಲು, ಆಲೇಖಾನ್ ಹೊರಟ್ಟಿ, ಚಕ್ಕಮಕ್ಕಿ ಗ್ರಾಮಗಳಲ್ಲಿ ಭೂಮಿಯೊಳಗಿಂದ ನಾಲ್ಕೈದು ಸೆಕೆಂಡ್ ಭಾರೀ ಶಬ್ದ ಕೇಳಿ ಬರುತ್ತಿದ್ದು, ಜನ ರಾತ್ರೋರಾತ್ರಿ ಮನೆ ಬಿಟ್ಟು ಬರುತ್ತಿದ್ದಾರೆ.
ಕಳೆದ ತಿಂಗಳ ಮಳೆಗೆ ಮನೆಯ ಮೇಲ್ಛಾವಣೆ ಕುಸಿಯುತ್ತಿತ್ತು. ಆದರೆ ಎರಡನೇ ರೌಂಡಿನ ಮಳೆರಾಯನ ಅಬ್ಬರಕ್ಕೆ ಮನೆಯ ತಳಪಾಯವೇ ಕುಸಿಯುವಂತಾಗಿದೆ. ಆಗಸ್ಟ್ ತಿಂಗಳ ಮಳೆಯಿಂದ ಕುಸಿದಿದ್ದ ಬೆಟ್ಟಗುಡ್ಡಗಳ ಹಾಸುಪಾಸಿನಲ್ಲೇ ಮತ್ತೆ ಕುಸಿತ ಉಂಟಾ ಆಗುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ದಾರಿ ಕಾಣದಂತಾಗಿದೆ. ಮೂಡಿಗೆರೆಯ ಕೊಟ್ಟಿಗೆಹಾರ, ದುರ್ಗದಹಳ್ಳಿ, ಮಲೆಮನೆ, ಹಿರೇಬೈಲು, ಜಾವಳಿ, ಬಣಕಲ್ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.