ಹಾವೇರಿ: ಮಳೆಯ ಜೂಜಾಟಕ್ಕೆ ಸೆಡ್ಡು ಹೊಡೆದ ಕುನ್ನೂರಿನ ಯುವರೈತ ಶಂಕರ್, ಸ್ವಪ್ರಯತ್ನದಿಂದ ಕೊಳವೆ ಬಾವಿಗೆ ನೀರು ಇಂಗಿಸುವ ಪದ್ಧತಿ ಅಳವಡಿಸಿಕೊಂಡು ಯಶಸ್ವಿ ರೈತನಾಗಿ ದೇಶ-ವಿದೇಶಿಗರ ಗಮನ ಸೆಳೆದಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ನಿವಾಸಿಯಾದ ಐ.ಟಿ.ಐ ಪದವೀಧರ ಶಂಕರ್ ಸೋಗಲಿ ಅವರು ತಮ್ಮ ಹೊಲದಲ್ಲಿ ಕೊರೆಸಿದಂತಹ ಬೋರ್ ವೆಲ್ ನೀರಿನ ಇಳುವರಿಯನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡು ಅಲ್ಪ ಜಮೀನಿನಲ್ಲಿ ಲಾಭದಾಯಕ ಕೃಷಿಯಲ್ಲಿ ತೊಡಗಿದ್ದಾರೆ.
ಆರಂಭದಲ್ಲಿ ಕೇವಲ ಎರಡು ಇಂಚಿನಷ್ಟು ಮಾತ್ರ ನೀರು ಬಿದ್ದಿದ್ದು ತನ್ನ 1.29ಗುಂಟೆ ಜಮೀನಿಗೆ ನೀರು ಉಣಿಸಲು ಪರದಾಡುತಿದ್ದರು ಮಳೆಯೂ ಇಲ್ಲದೆ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣವು ಕುಸಿತ ಕಂಡಿತು. ಹೀಗಾಗಿ ಕೃಷಿಯನ್ನೆ ನಂಬಿದ್ದ ಶಂಕರ್ ಬದುಕು ಕೈಕೊಡುವ ಆತಂಕದಲ್ಲಿದ್ದರು. ಈ ಸಂದರ್ಭದಲ್ಲಿ ಕೃಷಿ ಇಲಾಖಾ ಅಧಿಕಾರಿಗಳ ಸಲಹೆ ಇವರ ಬದುಕನ್ನು ಬದಲಾಯಿಸಿತು ಎಂದು ಅವರು ಹೇಳುತ್ತಾರೆ.
ಜಮೀನಲ್ಲಿ ತೋಡಿದ ಕೊಳವೆಬಾವಿ ಸಮಿಪದಲ್ಲಿಯೇ ಎರಡು ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಎರಡು ಮೀಟರ್ ಉದ್ದ, ಒಂದು ಮೀಟರ್ ಅಗಲ, ಎರಡು ಮೀಟರ್ ಆಳವಾದ ಗುಂಡಿಯನ್ನು ತೆಗೆದು, ಗುಂಡಿಯಲ್ಲಿ ಎರಡು ಪೀಟ್ ಮರಳು, ಇದ್ದಿಲು, ದಪ್ಪದಾದ ಜಲ್ಲಿ ಕಲ್ಲು ತುಂಬಿಸಿದ್ದಾರೆ. ಇದರ ಪ್ರತಿಫಲವಾಗಿ ಗುಂಡಿಯಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಭೂಮಿಗೆ ಇಂಗಿಸಿದ್ದಾರೆ. ಪರಿಣಾಮ ಕೇವಲ ಎರಡು ಇಂಚು ನೀರಿನ ಇಳುವರಿಯ ಕೊಳವೆಬಾವಿ ಇದೀಗ ದ್ವಿಗುಣಗೊಂಡು ನಾಲ್ಕು ಇಂಚು ನೀರು ಹೊರಹೊಮ್ಮುತ್ತಿದೆ.
ಇದಲ್ಲದೆ ಹೊಲದ ಸುತ್ತಲೂ ತಿರುವು ಕಾಲುವೆಯಿಂದ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಇಂಗುಗುಂಡಿಗೆ ಸೇರಿಸಲಾಗಿದೆ. ಇಂತಹ ಪ್ರಯೋಗದಿಂದ ತಮ್ಮ ಹೊಲದಲ್ಲಿನ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯನ್ನು ತಡೆಯಬಹುದು. ಹೀಗೆ ಮಾಡುವುದರಿಂದ ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು 90 ಲಕ್ಷ ಲೀಟರಿಗೂ ಅಧಿಕ ಮಳೆ ನೀರನ್ನು ಇಂಗಿಸಲಾಗುತ್ತದೆ. ಇದರ ಪರಿಣಾಮ ಒಂದು ಬೆಳೆ ಬೆಳೆಯಲು ಪರದಾಡುತ್ತಿದ್ದ ನನಗೆ ಮೂರು ಬೆಳೆಯನ್ನು ಬೆಳೆಯುವಷ್ಟು ತೇವಾಂಶ ಭೂಮಿಯಲ್ಲಿರುತ್ತದೆ, ಸಮೃದ್ಧ ಬೆಳೆ ಬರುತ್ತದೆ ಎಂದು ಶಂಕರ್ ಹೇಳುತ್ತಾರೆ.
ಈ ಪ್ರಯೋಗದಲ್ಲಿ ಮತ್ತಷ್ಟು ಸುಧಾರಣೆಕಂಡುಕೊಂಡ ಶಂಕರ್ ಅವರು ಇಂಗುಗುಂಡಿಯನ್ನ ಕೇವಲ ಮಣ್ಣು, ಕಲ್ಲುಗಳನ್ನು ಬಳಸಿ ನಿರ್ಮಿಸುವ ವಿಧಾನವನ್ನು ಬದಲಿಸಿ, ಹೊಸದಾಗಿ ಸಿಮೆಂಟ್ ರಿಂಗು, ಜಲ್ಲಿ, ಮರಳನ್ನು ಬಳಸಿಕೊಂಡು ಸುಲಭವಾದ ರೀತಿಯಲ್ಲಿ ನೀರನ್ನು ಇಂಗಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ಇಂಗುಗುಂಡಿಗಳು ಮುಚ್ಚಿಹೋಗುವುದು ತಪ್ಪಿದೆ ಎನ್ನುತ್ತಾರೆ.
ಯುವ ರೈತನ ಈ ಹೊಸ ಪ್ರಯೋಗವನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯ ವಿದೇಶಿಯರಿಗೆ ಪರಿಚಯಿಸಿದೆ. ಆಸ್ಟ್ರೇಲಿಯಾ, ಇಸ್ರೇಲ್, ಕೆನಡಾ, ಸೇರಿದಂತೆ ಏಳು ರಾಷ್ಟ್ರದ ರೈತ ಪ್ರತಿನಿಧಿಗಳು ಕುನ್ನೂರ ಗ್ರಾಮದ ಶಂಕರ್ ಅವರ ಜಮೀನಿಗೆ ಬಂದು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಇವರ ಈ ಪ್ರಯೋಗಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು 2017ರ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ, ದೇಶಪಾಂಡೆ ಫೌಂಡೇಶನ್ ಕೊಡಮಾಡುವ ಕೃಷಿ ಸಿಂಚನ ಪ್ರಶಸ್ತಿ, 2019-20ನೇ ಸಾಲಿನ ಹಾವೇರಿ ಜಿಲ್ಲಾಮಟ್ಟದ ಶ್ರೇಷ್ಟ ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಿದೆ.
ತುಂಡು ಭೂಮಿಯಲ್ಲಿ ಹಿಂಡು ಬೇಸಾಯ:
1.29 ಗುಂಟೆ ಜಮೀನು ಮಾತ್ರ ಹೊಂದಿರುವ ಶಂಕರ್ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬಹು ಬೆಳೆಗಳ ಪದ್ಧತಿಯನ್ನು ಅನುಸರಿಸಿದ್ದಾರೆ. ಈ ಜಮೀನಿನಲ್ಲಿ 303 ಅಡಿಕೆ ಸಸಿ, 1200 ಅಂಗಾಂಶ ಬಾಳೆ, 300 ಶ್ರೀಗಂಧದ ಗಿಡಗಳು, 10 ತೆಂಗಿನ ಗಿಡ, 100 ಲಿಂಬು, ಐದು ಪೇರಲೆ, ಹೊಲದ ಸುತ್ತಲೂ 1120 ಗಾಳಿಮರಗಳು ಹಾಗೂ ಔಷಧೀಯ ಸಸ್ಯಗಳಾದ ಲಿಂಬೆಹುಲ್ಲು (ನೆಗಡಿ), ಮಾಗಣಿ ಬೇರು (ಉಪ್ಪಿನ ಕಾಯಿ ತಯಾರಿಸಲು), ಬಿಳಿ ಗಲಗುಂಜಿ (ಧ್ವನಿ ಸರಿಪಡಿಸಲು), ಪತ್ರಿ ಪಟ-ಪಟ (ಕಿಡ್ನಿ ಹರಳು), ಒಂದೇಲಗಾ (ನೆನಪಿನ ಶಕ್ತಿ ಹೆಚ್ಚಿಸುವುದು ), ಮಧುನಾಸಿನಿ ( ಸಕ್ಕರೆ ಕಾಯಿಲೆ)ಯಂತಹ ಆಯುರ್ವೆದದ ಔಷಧಿಯ ಸಸ್ಯಗಳನ್ನು ಬೆಳೆಸಿರುವುದು ವಿಶೇಷವಾಗಿದೆ.
ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಹತ್ತು ಗುಂಟೆಯಲ್ಲಿ ನೆರಳು ಪರದೆ ನಿರ್ಮಿಸಿಕೊಂಡು ತರಕಾರಿ ಬೆಳೆಯನ್ನು ಬೆಳೆಯುತ್ತಾರೆ. ಜಮೀನಿಗೆ ಬೇಕಾಗುವ ಸಾವಯವ ಗೊಬ್ಬರ ತಯಾರಿಸಲು ಎರೆಹುಳ ತೊಟ್ಟಿಯನ್ನು ನಿರ್ಮಿಸಿಕೊಂಡಿದ್ದಾರೆ. ದೇಶಿ ಆಕಳು ಸಾಕಾಣಿಕೆಯಿಂದ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶಿ ಹಸುವಿನಿಂದ ಬಿಜಾಮೃತ, ಜೀವಾಮೃತ, ಹೋದಿಕೆ, ವಾಪಾಸಾ ಹಂತಗಳನ್ನು ಅನುಸರಿಸುತ್ತಿದ್ದಾರೆ. ಈ ಎಲ್ಲ ಪದ್ಧತಿಯ ಅನುಸರಣೆಗೆ ಮಹಾರಾಷ್ಟ್ರದ ಸಹಜ ಕೃಷಿ ಪದ್ಧತಿಯ ಸುಭಾಷ್ ಪಾಳೆಕೆರ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದಿರುವುದಾಗಿ ತಿಳಿಸುತ್ತಾರೆ. ಇಡೀ ಜಗತ್ತೇ ಇಸ್ರೇಲ್ ಮಾದರಿಯ ಕೃಷಿಪದ್ಧತಿ ಅನುಸರಿಸುವ ತವಕದಲ್ಲಿದ್ದರೆ ನಮ್ಮಲ್ಲಿಯೇ ಸದ್ದಿಲ್ಲದೆ ನೈಸರ್ಗಿಕ ಕೃಷಿ ಪದ್ಧತಿ ಮತ್ತು ಇಂಗುಗುಂಡಿಗಳ ಕ್ರಮದಿಂದ ಲಾಭದಾಯಕ ಕೃಷಿಯಲ್ಲಿ ತೊಡಗಿರುವ ಕುನ್ನೂರ ಶಂಕರ್ ಯುವ ರೈತರಿಗೆ ಮಾದರಿಯಾಗಿದ್ದಾರೆ.