– ಗೊಂದಲ ಮೂಡಿಸದಂತೆ ಮಂತ್ರಿಗಳಿಗೆ ಎಚ್ಚರಿಕೆ
ಬೆಂಗಳೂರು: ಗೃಹಲಕ್ಷ್ಮಿ (Gruhalakshmi) ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಮನೆಯ ಯಜಮಾನಿ ಯಾರು ಅಂತ ನಾವು ನಿರ್ಧಾರ ಮಾಡೋಕಾಗುತ್ತಾ? ಮನೆಯ ಯಜಮಾನಿ ಯಾರು ಅಂತ ಆಯಾ ಮನೆಯವರೇ ನಿರ್ಧರಿಸುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಅತ್ತೆಯೇ ಮನೆಗೆ ಯಜಮಾನಿ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಮನೆಯ ಯಜಮಾನಿ ಯಾರು ಅಂತ ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ. ಮನೆಯ ಯಜಮಾನಿ ಯಾರು ಅಂತ ಆಯಾ ಮನೆಯವರೇ ನಿರ್ಧರಿಸುತ್ತಾರೆ. ಅತ್ತೆನಾ, ಸೊಸೆನಾ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸುತ್ತದೆ. ಈ ಬಗ್ಗೆ ಯಾವುದೇ ಮಂತ್ರಿಗಳು ಮಾತನಾಡಿ ಗೊಂದಲ ಮೂಡಿಸದಂತೆ ಸೂಚಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್: ಎಸ್.ಎಲ್ ಭೋಜೇಗೌಡ
ಒಮ್ಮೆಲೆ ಎಲ್ಲ 5 ಗ್ಯಾರಂಟಿಗಳ ಜಾರಿಯಾಗುತ್ತೋ ಇಲ್ವೋ ಎಂಬುದನ್ನು ನಾನು ಬಹಿರಂಗಪಡಿಸಲ್ಲ. ಆರ್ಥಿಕ ಇಲಾಖೆ ಅಧಿಕಾರಿಗಳು 4-5 ಆಯ್ಕೆ ಕೊಟ್ಟಿದ್ದಾರೆ. ನಾವು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿ, ಯೋಜನೆಗಳನ್ನು ಹೇಗೆ ಜಾರಿಗೊಳಿಸೋದು ಎಂಬುದನ್ನು ನಿರ್ಧರಿಸುತ್ತೇವೆ. ನುಡಿದಂತೆ ನಡೆಯುತ್ತೇವೆ, ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ. ಎಲ್ಲವನ್ನೂ ಕ್ರಮಬದ್ಧವಾಗಿ ಜಾರಿ ಮಾಡುತ್ತೇವೆ ಎಂದರು.
ವಿಪಕ್ಷಗಳು ಏನೇ ಮಾತಾಡಲಿ, ಒತ್ತಡ ಹಾಕಲಿ. ಅವರಿಗೆ ಮಾತನಾಡುವ ಸ್ವಾತಂತ್ರ್ಯ ಇದೆ. ಬಿಜೆಪಿಯವರು 15 ಲಕ್ಷ ರೂ. ಕೊಡುತ್ತೇವೆ ಎಂದಿದ್ದರು. ನಾವು ರಾಜ್ಯ, ಮತದಾರರನ್ನು ಉಳಿಸುವ ಕೆಲಸ ಮಾಡುತ್ತೇವೆ. ಷರತ್ತುಗಳು ಇವೆಯೋ ಇಲ್ಲವೋ ಎಂಬುದು ಮುಖ್ಯ ಅಲ್ಲ. ಪ್ರತಿಯೊಂದಕ್ಕೂ ಒಂದು ವ್ಯವಸ್ಥೆ ಅಗತ್ಯ. ವ್ಯವಸ್ಥಿತವಾಗಿ ಜಾರಿ ಮಾಡ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜೋಶ್ನಲ್ಲಿ ನನಗೂ ಫ್ರೀ ನಿನಗೂ ಫ್ರೀ ಅಂತ ಹೇಳಿದ್ದಾರೆ: ಶಿವಲಿಂಗೇ ಗೌಡ