ಲಕ್ನೋ: ಶಾಲೆಗೆ ಹೋಗುತ್ತಿದ್ದ 12 ವರ್ಷದ ಬಾಲಕಿ ಮೇಲೆ 20 ವರ್ಷದ ಯುವಕ ಬುಧವಾರ ಅತ್ಯಾಚಾರವೆಸಗಿರುವುದಾಗಿ ಆರೋಪಿಸಲಾಗಿದ್ದು, ಆತ ತಪ್ಪಿಸಿಕೊಂಡು ಓಡುವ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಬಾಲಕಿ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ವೇಳೆ ಆರೋಪಿ ಅವಳನ್ನು ಭೇಟಿಯಾಗಲು ಆಮಿಷ ಒಡ್ಡಿದ್ದ. ಬಳಿಕ ಆಕೆಯನ್ನು ಸೆಕ್ಟರ್ 32ರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಸೆಕ್ಟರ್ 24ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಈ ಹಿಂದೆಯೂ ಒಂದೆರಡು ಬಾರಿ ಬಾಲಕಿಗೆ ಬಲವಂತಪಡಿಸಿರುವುದಾಗಿ ತಿಳಿಸಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ವರ್ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!
ಆರೋಪಿಯನ್ನು ಬಳಿಕ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಣ್ವಿಜಯ್ ಸಿಂಗ್ ಅವರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದರು. ಆದರೆ ಪೊಲೀಸ್ ಠಾಣೆಗೆ ಹಿಂತಿರುಗುವ ಸಂದರ್ಭ ಆತ ಬಂಧನದಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದ.
ಆರೋಪಿ ಪೊಲೀಸ್ ವ್ಯಾನ್ನಿಂದ ಜಿಗಿದು, ಓಡಿ ಹೋಗಲು ಪ್ರಯತ್ನಿಸಿದ್ದ. ಆದರೆ ಪೊಲೀಸರು ಆತ ತಪ್ಪಿಸಿಕೊಳ್ಳದಂತೆ ಸುತ್ತುವರಿದಿದ್ದರು. ಈ ವೇಳೆ ಆರೋಪಿ ಕೈಗೆ ಸಿಕ್ಕ ಇಟ್ಟಿಗೆ, ಕಲ್ಲುಗಳಿಂದ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ. ಇದರಿಂದ ಪೊಲೀಸರು ಅನಿವಾರ್ಯವಾಗಿ ಆತನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2 ವಾರದಲ್ಲಿ 5ನೇ ಪ್ರಕರಣ – ತಮಿಳುನಾಡಿದ 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಗುಂಡೇಟಿನ ಚಿಕಿತ್ಸೆಗೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]