ಲಕ್ನೋ: ಕನ್ವರ್ ಯಾತ್ರೆ ಕೈಗೊಂಡಿದ್ದ ವೇಳೆ ಕನ್ವಾರಿಯಾಗಳ (ಶಿವ ಭಕ್ತರ) ಗುಂಪೊಂದನ್ನು ಹಿಂದಿಕ್ಕಿದ ಕಾರಣಕ್ಕೆ 25 ವರ್ಷ ವಯಸ್ಸಿನ ಯೋಧರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.
ಉತ್ತರ ಪ್ರದೇಶದಿಂದ ಕನ್ವಾರಿಯಾಗಳ ಗುಂಪಿನೊಂದಿಗೆ ಯೋಧ ಕಾರ್ತಿಕ್ ಅವರು ಕನ್ವರ್ ಯಾತ್ರೆ ಕೈಗೊಂಡಿದ್ದರು. ಹರಿಯಾಣದಿಂದ ಯಾತ್ರೆ ಕೈಗೊಂಡಿದ್ದ ಕನ್ವಾರಿಯಾಗಳ ಮತ್ತೊಂದು ಗುಂಪು ಯೋಧ ಕಾರ್ತಿಕ್ರನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ
ಭಾರತೀಯ ಸೇನೆಯ ಜಾಟ್ ರೆಜಿಮೆಂಟ್ನ ಯೋಧ ಕಾರ್ತಿಕ್ ಹಲ್ಲೆಗೊಳಗಾದವರು. ಎರಡು ಗುಂಪುಗಳು ಮೋಟಾರ್ ಬೈಕ್ನಲ್ಲಿ ಚಲಾಯಿಸುತ್ತಿದ್ದ ವೇಳೆ ಪರಸ್ಪರ ರೇಸಿಂಗ್ ಮಾಡಿದ್ದಾರೆ. ಹರಿಯಾಣದಿಂದ ಬಂದ ಕನ್ವಾರಿಯಾಗಳು ಕಾರ್ತಿಕ್ ಮೇಲೆ ಕಬ್ಬಿಣದ ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹರಿದ್ವಾರ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶೇ. 50ರಷ್ಟು ವಿಮಾನವಷ್ಟೇ ಕಾರ್ಯ ನಿರ್ವಹಿಸಲು ಸ್ಪೈಸ್ಜೆಟ್ಗೆ ಆದೇಶ
ಕಾರ್ತಿಕ್ ಅವರು ಮುಜಾಫರ್ನಗರ ಜಿಲ್ಲೆಯ ಸಿಸೌಲಿ ಗ್ರಾಮದವರಾಗಿದ್ದು, ಮಂಗಳವಾರ ಈ ಘಟನೆ ಸಂಭವಿಸಿದೆ. ತನ್ನ ಗುಂಪಿನ ಇತರ ಸದಸ್ಯರೊಂದಿಗೆ ಗಂಗಾಜಲವನ್ನು ಸಂಗ್ರಹಿಸಿ ಹರಿದ್ವಾರದಿಂದ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಎಸ್ಪಿ ದೋಭಾಲ್ ತಿಳಿಸಿದ್ದಾರೆ.
ಬಂಧಿತರನ್ನು ಸುಂದರ್ (38), ರಾಹುಲ್ (20), ಸಚಿನ್ (25), ಆಕಾಶ್ (21), ಪಂಕಜ್ (22) ಮತ್ತು ರಿಂಕು (24) ಎಂದು ಪೊಲೀಸರು ಗುರುತಿಸಿದ್ದಾರೆ. ಇವರೆಲ್ಲರೂ ಹರಿಯಾಣದ ಪಾಣಿಪತ್ ಜಿಲ್ಲೆಯ ಚುಲ್ಕಾನಾ ಗ್ರಾಮದವರು ಎಂದು ಎಸ್ಪಿ ಹೇಳಿದ್ದಾರೆ.