ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಕುಂಬ್ಳೆ ಮೇಲೆ ತಾವು ಇಟ್ಟಿರುವ ಅಭಿಮಾನವನ್ನು ಮತ್ತೊಮ್ಮೆ ಗೌತಮ್ ಗಂಭೀರ್ ಹೇಳಿದ್ದಾರೆ. ಕುಂಬ್ಳೆಗಾಗಿ ತಮ್ಮ ಜೀವವನ್ನೇ ನೀಡೋದಾಗಿ ಗಂಭೀರ್ ತಿಳಿಸಿದ್ದಾರೆ.
ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಆಡಿದ ಅನುಭವ ಕುರಿತು ಮಾತನಾಡಿರುವ ಗಂಭೀರ್, ಭಾರತ ಕ್ರಿಕೆಟ್ಗೆ ದೊರೆತ ಮಹತ್ವದ ಆಟಗಾರ ಅನಿಲ್ ಕುಂಬ್ಳೆ. ಅವರು ಆಡುತ್ತಿದ್ದ ಸಂದರ್ಭದಲ್ಲಿ ಡಿಆರ್ಎಸ್ ಮನವಿ ಇದ್ದಿದ್ದರೆ 900 ವಿಕೆಟ್ ದಾಖಲೆ ಬರೆಯುತ್ತಿದ್ದರು. ತಂಡದಲ್ಲಿ ನನ್ನ ಬಗ್ಗೆ ಭರವಸೆ ಇಟ್ಟಿದ್ದ ಆಟಗಾರ ಅನಿಲ್ ಬಾಯ್ ಮಾತ್ರ ಎಂದು ಗಂಭೀರ್ ತಮ್ಮ ಆಲ್ಟೈಮ್ ಇಲೆವೆನ್ ತಂಡದ ನಾಯಕರಾಗಿ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ಸುನಿಲ್ ಗವಾಸ್ಕರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ.
2008ರಲ್ಲಿ ಆಸೀಸ್ ಟೆಸ್ಟ್ ಟೂರ್ನಿಗೂ ಮುನ್ನ ನಡೆದ ಘಟನೆಗಳನ್ನು ಬಿಚ್ಚಿಟ್ಟಿರುವ ಗಂಭೀರ್, ನಾನು, ಸೆಹ್ವಾಗ್ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕುಂಬ್ಳೆ ನಮ್ಮ ಬಳಿಗೆ ಬಂದಿದ್ದರು. ಏನು ನಡೆದರು ಈ ಟೂರ್ನಿಯಲ್ಲಿ ನೀವೇ ಆರಂಭಿಕ ಆಟಗಾರರು. ನೀವು 8 ಬಾರಿ ಶೂನ್ಯಕ್ಕೆ ಔಟಾದರೂ ನಿಮ್ಮನ್ನೇ ಆರಂಭಿಕರನ್ನಾಗಿ ಕಣಕ್ಕೆ ಇಳಿಸುತ್ತೇನೆ ಎಂದಿದ್ದರು. ನಾನು ಯಾರಿಗಾದರೂ ನನ್ನ ಜೀವ ನೀಡಬೇಕು ಎಂದರೇ ಕುಂಬ್ಳೆ ಅವರಿಗೆ ನೀಡುತ್ತೇನೆ. ಅವರು ಅಂದು ಹೇಳಿದ್ದ ಮಾತುಗಳು ಇಂದಿಗೂ ನನ್ನ ಮನಸ್ಸಿನಲ್ಲಿದೆ ಎಂದು ಗಂಭೀರ್ ವಿವರಿಸಿದ್ದಾರೆ.
ಸೌರವ್ ಗಂಗೂಲಿ, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಂತೆ ಅನಿಲ್ ಕುಂಬ್ಳೆ ಕೂಡ ಟೀಂ ಇಂಡಿಯಾ ತಂಡಕ್ಕೆ ದೀರ್ಘಾವಧಿ ನಾಯಕರಾಗಬೇಕಿತ್ತು. ಮತ್ತಷ್ಟು ಸಮಯ ಅವರು ತಂಡದ ನಾಯಕರಾಗಿದ್ದರೆ ಹಲವು ದಾಖಲೆಗಳು ನಿರ್ಮಿಸುತ್ತಿದ್ದರು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಗಂಭೀರ್ ಆಯ್ಕೆಯ ಆಲ್ಟೈಮ್ ಇಲೆವೆನ್ ಟೆಸ್ಟ್ ತಂಡ: ಅನಿಲ್ ಕುಂಬ್ಳೆ (ನಾಯಕ), ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್.