ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿದ್ದ ಇತಿಹಾಸ ಪ್ರಸಿದ್ಧ ಗಂಗೈಯಮ್ಮ ದೇವಸ್ಥಾನವನ್ನ ಪಾಲಿಕೆ ಅಧಿಕಾರಿಗಳು ತೆರವುಗೊಳಿದ್ದಾರೆ.
ಬೆಂಗಳೂರಿನ ಶ್ರೀರಾಂಪುರಲ್ಲಿ ಗಂಗೈಯಮ್ಮ ದೇವಸ್ಥಾನವಿದ್ದು, ಪೊಲೀಸ್ ಸರ್ಪಗಾವಲಿನ ನಡುವೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಪಾಲಿಕೆ ಅಧಿಕಾರಿಗಳು ದೇವಸ್ಥಾನವನ್ನ ಹಾಗೂ ಅದರೊಳಗೆ ಇದ್ದ ಗಂಗೈಯಮ್ಮ ದೇವಿಯ ವಿಗ್ರಹವನ್ನ ತರೆವುಗೊಳಿಸಿ, ಅರಳಿ ಮರದ ಕೆಳಗಡೆ ಇಟ್ಟು ದೇವಸ್ಥಾನವನ್ನ ಒಡೆದು ಹಾಕಲಾಯ್ತು.
ಗಂಗೈಯಮ್ಮ ದೇವಸ್ಥಾನ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆಂದು ಆರೋಪಿಸಿ ವಿಜಯಾ ಎಂಬ ಮಹಿಳೆ ಹೈಕೋರ್ಟ್ ಮೇಟ್ಟಿಲೇರಿದ್ದರು. ನ್ಯಾಯಾಲಯ ದೇವಸ್ಥಾನದ ಜಾಗವನ್ನ ಪರಿಶೀಲನೆ ಮಾಡಿ ತೆರವುಗೊಳಿಸಲು ಆದೇಶ ಮಾಡಿತ್ತು. ಅಧಿಕಾರಿಗಳು ದೇವಸ್ಥಾನವನ್ನ ಒಡೆದು ಹಾಕಲು ಎರಡು ಮೂರು ಬಾರಿ ಪ್ರಯತ್ನ ಮಾಡಿದ್ದರು. ಆದರೆ ಭಕ್ತಾದಿಗಳು ಯಾವುದೇ ಕಾರಣಕ್ಕೂ ದೇವಸ್ಥಾನವನ್ನ ಒಡೆದು ಹಾಕಲು ಬಿಡೋದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರಿಂದ ದೇವಸ್ಥಾನ ತೆರವುಗೊಳಿಸಲು ಆಗಿರಲಿಲ್ಲ.
ಹೈಕೋರ್ಟ್ ಇದೇ ತಿಂಗಳ 20ರ ಒಳಗಾಗಿ ದೇವಸ್ಥಾನ ತೆರವು ಮಾಡಿ ವರದಿ ನೀಡಲು ಪಾಲಿಕೆಗೆ ಗಡವು ನೀಡಿತ್ತು. ಹೀಗಾಗಿ ಭಕ್ತಾದಿಗಳನ್ನ ಮಂಗಳವಾರ ಸಂಪರ್ಕ ಮಾಡಿ, ದೇವಸ್ಥಾನ ತೆರವುಗೊಳಿಸಲೇ ಬೇಕು ನ್ಯಾಯಾಲಯ 20ನೇ ತಾರೀಖಿನ ಒಳಗಾಗಿ ತೆರವುಗೊಳಿಸಿ ವರದಿಕೊಡುವಂತೆ ಸೂಚಿಸಿದೆ. ಭಕ್ತಾದಿಗಳೆಲ್ಲರು ಸಹಕರಿಸುವಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಆದರೂ ಭಕ್ತಾದಿಗಳು ಗಲಾಟೆ ಮಾಡುವ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಪೊಲೀಸ್ ಭದ್ರತೆಯ ನಡುವೆ ದೇವಸ್ಥಾನ ತೆರವು ಮಾಡಲಾಯ್ತು.