– 76 ದಿನಗಳ ಕಾಲ ಒತ್ತಡ ತಡೆದು ಭಾರತ ತನ್ನ ಜನರನ್ನ ರಕ್ಷಿಸಿದೆ
– ವಿಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ವ್ಯಾಟ್ ಪ್ರಮಾಣ ಹೆಚ್ಚಿದೆ
ನವದೆಹಲಿ: 10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದ್ದರೂ (Fuel Price Hike), ಜಾಗತಿಕ ಇಂಧನ ಬಿಕ್ಕಟ್ಟಿನ ಸಂಪೂರ್ಣ ಪರಿಣಾಮದಿಂದ ಭಾರತ ತನ್ನ ಗ್ರಾಹಕರನ್ನ ರಕ್ಷಣೆ ಮಾಡಿದೆ ಎಂದು ಕೇಂದ್ರ ಸರ್ಕಾರದ (Central Government) ಮೂಲಗಳು ತಿಳಿಸಿವೆ.
ಕಚ್ಚಾ ತೈಲದ ವೆಚ್ಚಗಳು ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾದ ಅಡಚಣೆಗಳ ಹೊರತಾಗಿಯೂ ಚಿಲ್ಲರೆ ಇಂಧನ ಬೆಲೆ ಏರಿಕೆ ಮಾಡದೇ 76 ದಿನಗಳ ಕಾಲ ಒತ್ತಡ ತಡೆದುಕೊಂಡಿದೆ ಎಂದು ಹೇಳಿದೆ. ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೆ ಶಾಕ್; ಪೆಟ್ರೋಲ್ 87, ಡೀಸೆಲ್ 91 ಪೈಸೆ ಏರಿಕೆ
ಸರ್ಕಾರದ (Government) ಅಂಕಿ-ಅಂಶಗಳ ಪ್ರಕಾರ, ಮೇ 15, 19 ಮತ್ತು 23 ರಂದು ಮೂರು ಬಾರಿ ಹಂತ-ಹಂತವಾಗಿ ಇಂಧನ ಬೆಲೆ ಹೆಚ್ಚಿಸಲಾಗಿದೆ. ಮೂರು ಹಂತಗಳಲ್ಲಿ ಒಟ್ಟು 4.74 ರೂ. ನಿಂದ 4.82 ರೂ. ವರೆಗೆ ಬೆಲೆ ಏರಿಕೆಯಾಗಿದೆ. ಆದ್ರೆ ಹಲವಾರು ದೇಶಗಳಿಗೆ ಹೋಲಿಸಿದ್ರೆ, ಬೆಲೆ ಏರಿಕೆ ಭಾರತದಲ್ಲೇ (India) ಅತ್ಯಂತ ಕಡಿಮೆ ಎಂದು ಸಮರ್ಥಿಸಿಕೊಂಡಿದೆ.

ಭಾರತದಲ್ಲೇ ಅತ್ಯಂತ ಕಡಿಮೆ ದರ ಏರಿಕೆ
ಭಾರತದಲ್ಲಿ ಪೆಟ್ರೋಲ್, ಡೀಸೆಲ್ (Diesel) ಬೆಲೆ 5% ರಷ್ಟು ಮಾತ್ರ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನದಲ್ಲಿ 54.9%, ಅಮೆರಿಕದಲ್ಲಿ 44.5% ಹಾಗೂ ಯುಕೆ ನಲ್ಲಿ 19.2% ಇಂಧನ ಬೆಲೆಗಳು ಏರಿಕೆಯಾಗಿದೆ. ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಆಗಿರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳ (OMC) ಮೇಲೆ ಹೊರೆ ಹೆಚ್ಚಾಗಿದೆ. ಭಾರತೀಯ ತೈಲ ಕಂಪನಿಗಳು ಪ್ರತಿದಿನಕ್ಕೆ ಸುಮಾರು 1,000 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ. ಆದ್ರೆ ಇಂಧನ ದರ ಪರಿಷ್ಕರಣೆಯಿಂದ ಆ ನಷ್ಟ ದಿನಕ್ಕೆ 750 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ತಿಳಿಸಿದೆ. ಇದನ್ನೂ ಓದಿ: ಕಾಕ್ರೋಚ್ ಜನತಾ ಪಾರ್ಟಿಗೆ ಸಾಲು ಸಾಲು ಸವಾಲು? – ಎಕ್ಸ್ ಖಾತೆ ಬೆನ್ನಲ್ಲೇ ಇನ್ಸ್ಟಾ ಖಾತೆ ಹ್ಯಾಕ್

ವ್ಯಾಟ್ ಹೆಚ್ಚಳದಿಂದ ದರ ಏರಿಕೆ; ಕಾಂಗ್ರೆಸ್ ವಿರುದ್ಧ ಅಸಮಾಧಾನ
ಇನ್ನೂ ಇಂಧನ ತೆರಿಗೆಯಲ್ಲೂ ರಾಜಕೀಯ ಕೆಸರೆರಚಾಟ ಹೆಚ್ಚಾಗಿದ್ದು, ಬಿಜೆಪಿ ಆಡಳಿತವಿರುವ ಮತ್ತು ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ನಡುವೆ ದರ ಏರಿಕೆಯ ವ್ಯತ್ಯಾಸವನ್ನು ಕೇಂದ್ರ ತೋರಿಸಿದೆ. ವಿಪಕ್ಷಗಳ ಆಡಳಿತ ರಾಜ್ಯಗಳಾದ ತೆಲಂಗಾಣ ಮತ್ತು ಕೇರಳದಂತ ರಾಜ್ಯಗಳಲ್ಲಿ ಹೆಚ್ಚಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಯಿಂದಾಗಿ ಪೆಟ್ರೋಲ್, ಡೀಸೆಲ್ ದರ ಅತ್ಯಂತ ದುಬಾರಿಯಾಗಿದೆ. ಆದ್ರೆ ಬಿಜೆಪಿ ಆಡಳಿತದ ಗುಜರಾತ್, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ, ಗೋವಾ ಮತ್ತು ಅಸ್ಸಾಂನಲ್ಲಿ ದರಗಳು ಕಡಿಮೆಯಿದೆ. ಇದನ್ನೂ ಓದಿ: ಚೀನಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ; 82 ಜನ ಸಾವು
ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಸುಂಕವು ದೇಶಾದ್ಯಂತ ಏಕರೂಪವಾಗಿಯೇ ಇರುತ್ತದೆ. ಆದ್ರೆ ಚಿಲ್ಲರೆ ಇಂಧನ ಬೆಲೆಗಳಲ್ಲಿನ ವ್ಯತ್ಯಾಸ ಮತ್ತು ರಾಜ್ಯಗಳು ವಿಧಿಸುವ ವ್ಯಾಟ್ನಿಂದ ದರ ಹೆಚ್ಚಳ ಕಂಡುಬರುತ್ತಿದೆ. ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟ ಆಡಳಿತ ರಾಜ್ಯಗಳು ವ್ಯಾಟ್ ಕಡಿಮೆ ಮಾಡದೇ ತೆರಿಗೆ ಕಡಿತಗೊಳಿಸುವಂತೆ ಒತ್ತಾಯಿಸುತ್ತಿರುವುದು ದುರದೃಷ್ಟಕರ ಎಂದು ಕೇಂದ್ರ ಸರ್ಕಾರ ವಿಪಕ್ಷಗಳ ನಡೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.

ಯುಪಿಎ ಸರ್ಕಾರ ಮಾಡಿದ್ದಾದ್ರೂ ಏನು?
2026 ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 10 ರೂ. ಗಳಷ್ಟು ಕಡಿಮೆ ಮಾಡಿತ್ತು. ಡೀಸೆಲ್ ಅಬಕಾರಿ ಸುಂಕವನ್ನು ಶೂನ್ಯಕ್ಕೆ ಇಳಿಸಿತ್ತು. ಇದರಿಂದ ಕೇಂದ್ರದ ಮೇಲೆ 30,000 ಕೋಟಿ ರೂಪಾಯಿ ಹೊರೆ ಹೆಚ್ಚಾದರೂ ಕೇಂದ್ರ ಅದನ್ನು ತಡೆದುಕೊಂಡಿತು. ಆದ್ರೆ ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ಮಾಡಿದ್ದಾದ್ರೂ ಏನು? 2005 & 2010 ರ ಮಧ್ಯೆ ಸುಮಾರು 1.34 ಲಕ್ಷ ಕೋಟಿ ರೂ.ಗಳ ಮೌಲ್ಯದ ತೈಲ ಬಾಂಡ್ಗಳನ್ನು ಬಿಡುಗಡೆ ಮಾಡಿತು. ಪ್ರಸ್ತುತ ಸರ್ಕಾರವು ಈಗಾಗಲೇ ಮೂಲ ಮೊತ್ತದ 1.30 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮರುಪಾವತಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ, ಸಂಸ್ಕರಣಾ ಮಿತಿಯಲ್ಲಿ ಒತ್ತಡ, ಆಮದು ತೆರಿಗೆ ಹೆಚ್ಚಳ ಹಾಗೂ ರೂಪಾಯಿ ಮೌಲ್ಯ ಕುಸಿತದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ 76 ದಿನಗಳ ವೆರೆಗೆ ಒತ್ತಡ ತಡೆದುಕೊಂಡು ಈಗ ಬೆಲೆ ಏರಿಕೆ ಮಾಡಿದೆ. ಅಷ್ಟೇ ಅಲ್ಲ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಕಚ್ಚಾತೈಲ ಬೆಲೆ ಶೇ.50 ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದೆ.
