ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜೆ ಸಿಗುವ ಸಾಧ್ಯತೆಯಿದೆ. ರಜೆ ಸಿಕ್ಕಿದರೂ 8 ಜಯಂತಿಗೆ ಸಿಗುತ್ತಿದ್ದ ಸಾಂದರ್ಭಿಕ ರಜೆ ರದ್ದಾಗುವ ಸಾಧ್ಯತೆಯಿದೆ.
ಆರನೇ ವೇತನ ಆಯೋಗ ನೀಡಿದ್ದ 2ನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂರ್ದಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು. ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಸಮಾಲೋಚಿಸಿ ಕೆಲ ಶಿಫಾರಸು ಮಾಡಿದೆ.
ಶಿಫಾರಸಿನಲ್ಲಿ ಏನಿದೆ?
ಸರ್ಕಾರಿ ನೌಕರರಿಗೆ ಈಗ ಇರುವಂತಹ 15 ಸಾಂದರ್ಭಿಕ ರಜೆಗಳ ಪೈಕಿ ಮೂರು ಕಡಿಮೆ ಮಾಡಿ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್ಗಳಿಗೆ ಕಡಿತ ಮಾಡುವುದು, ಹಬ್ಬ ಹಾಗೂ ವಿವಿಧ ಜಯಂತಿ ಸೇರಿ 23 ರಜೆ ಪೈಕಿ 8 ಜಯಂತಿಗಳನ್ನು ರದ್ದು ಮಾಡುವುದಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ಸದ್ಯದ ಮಾಹಿತಿಗಳ ಪ್ರಕಾರ ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಕಾರ್ಮಿಕ ದಿನ, ಗುಡ್ಫ್ರೈಡೆಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಬಹುದು ಎಂದು ಶಿಫಾರಸು ಮಾಡಿದೆ.
ಬದಲಾವಣೆ ಯಾಕೆ?
ಸರ್ಕಾರಿ ನೌಕರರು 100 ಕ್ಕೂ ಹೆಚ್ಚು ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜಾ ದಿನಗಳು ಬರುತ್ತದೆ. 15 ಸಾಂದರ್ಭಿಕ ರಜೆಗಳಿದ್ದು, ರಜಾ ದಿನಗಳ ಸಂಖ್ಯೆ ಹೆಚ್ಚಿರುವ ಕಾರಣ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ರಜೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv