ಕೊಪ್ಪಳ: ಜೆಡಿಎಸ್ ಮುಖಂಡರ, ಅಧಿಕಾರಿಗಳ ಮನೆಗಳ ಮೇಲೆ ಐಟಿಯವರು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿದ್ದರೆ ಅದು ತಪ್ಪು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾನೂನಿನಲ್ಲಿ ಆದಾಯ ತೆರಿಗೆ ಇಲಾಖೆಯವರಿಗೆ ದಾಳಿ ಮಾಡಲು ಅವಕಾಶ ಇದೆ. ಆದಷ್ಟೂ ನಾವು ಜಾಗೂರಕರಾಗಿದ್ದು, ಕಾನೂನನ್ನು ಪರಿಪಾಲನೆ ಮಾಡಬೇಕು. ನಾನಂತೂ ಕಾನೂನನ್ನು ಪರಿಪಾಲನೆ ಮಾಡುತ್ತೇನೆ. ಐಟಿಯವರು ಯಾವ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದರು.
ಒಂದೇ ಪಕ್ಷದವರ ಮಾಹಿತಿ ಬಂದಿದೆ ಅಂದರೆ ಅದಕ್ಕೆ ಸ್ಪಷ್ಟನೆ ನೀಡಲಿ. ಐಟಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಅನಿಸಿರಬಹುದು ಹೀಗಾಗಿ ಪ್ರತಿಭಟನೆ ಮಾಡಿದ್ದಾರೆ ಎಂದರು. ಚುನಾವಣೆ ಸಮಯದಲ್ಲಿ ಐಟಿ ದಾಳಿ ಆಗುತ್ತದೆ ಎಂದರೆ ಅದರ ಬಗ್ಗೆ ನಾನು ಹೇಳಲು ಇಷ್ಟಪಡುವುದಿಲ್ಲ. ಐಟಿ ಅಧಿಕಾರಿಗಳು ಮಾಹಿತಿ ಪ್ರಕಾರ ಎಲ್ಲರ ಮೇಲೂ ದಾಳಿ ಮಾಡುತ್ತಾರೆ. ಅದಕ್ಕೆ ಏನು ಮಾಡಲು ಆಗುತ್ತದೆ ಎಂದು ಅವರು ಪ್ರಶ್ನಿಸಿದ್ರು.