– ಮಧ್ಯಂತರ ಚುನಾವಣೆಗೆ ಸಿದ್ಧರಾದ್ರಾ ಮಾಜಿ ಸಿಎಂ
– ಕೇವಲ ಭಾವನಾತ್ಮಕ ವಿಚಾರಗಳಿಂದ ದೇಶ ಆಳಲು ಸಾಧ್ಯವಿಲ್ಲ
ಚಿಕ್ಕಮಗಳೂರು: ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ, ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಕಡೂರಿನ ಸಖರಾಯಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಅಂತ ನನಗೆ ಗೊತ್ತಿಲ್ಲ. ವಿಧಾನಸಭಾ ಚುನಾವಣೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. 2020ರ ಜನವರಿ, ಫೆಬ್ರವರಿ, ಏಪ್ರಿಲ್ ಮೇ… ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಈ ಭಾಗದ ಸಚಿವ ಅವನೆಷ್ಟೋ ಗ್ರಾಮಗಳನ್ನು ದತ್ತು ಪಡೆದಿದ್ದಾನಂತೆ. ಅವನು ದತ್ತು ಪಡೆದಿದ್ದನ್ನು ಇನ್ನೊಬ್ಬರಿಗೆ ಯಾಕೆ ಹೇಳುತ್ತಾನೆ. ಮೊದಲು ಅವರು ನೆರೆಪೀಡಿತ ಗ್ರಾಮಗಳನ್ನು ದತ್ತು ಪಡೆಯಲಿ ನೋಡೋಣ. ನೀವು ಅಂತವರನ್ನೇ ಆಯ್ಕೆ ಮಾಡಿ ವಿಧಾನ ಸೌಧಕ್ಕೆ ಕಳುಹಿಸುತ್ತೀರಿ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗುತ್ತೆ ಹೇಳಿ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು.
ಸಿ.ಟಿ.ರವಿ ಅವರಿಗೆ ಏಪ್ರಿಲ್ನಲ್ಲಿ ಭಾರೀ ಆಘಾತ ಕಾದಿದೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕವೇ ದೇಶವನ್ನು ಆಳಲು ಸಾಧ್ಯವಿಲ್ಲ. ಹಿಂದುತ್ವ, ರಾಮ ಮಂದಿರ, ಕಾಶ್ಮೀರ, ಪಾಕಿಸ್ತಾನ ಇಂತಹ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಎಂದು ಗುಡುಗಿದರು.