ದಾವಣಗೆರೆ: ಶೌಚಾಲಯ ಕಟ್ಟಿಸಿಕೊಳ್ಳದ ಹರಿಹರ ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ಮನೆ ಮುಂದೆ ಪುರಸಭೆ ಅಧಿಕಾರಿಗಳು ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಮಲೆಬೆನ್ನೂರು ಗ್ರಾಮದ ಪುರಸಭೆ ವ್ಯಾಪ್ತಿಯ 4ನೇ ವಾರ್ಡ್ ನ ಕಾಲಭೈರವ ರಸ್ತೆಯಲ್ಲಿರುವ ರುದ್ರಗೌಡರ ಮನೆ ಮುಂದೆ ಅಧಿಕಾರಿಗಳು ಧರಣಿ ನಡೆಸಿದರು. ರುದ್ರಗೌಡರಿಗೆ ಈಗಾಗಲೇ ಮೂರು ತಿಂಗಳ ಹಿಂದೆಯೇ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನ ಮಂಜೂರಾಗಿತ್ತು. ಆದರೆ ಮನೆಯಲ್ಲಿ ಮೂರು ತಿಂಗಳ ಬಾಣಂತಿ ಇರುವುದರಿಂದ ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಮನೆಯಲ್ಲಿ ಬಾಣಂತಿ ಇದ್ದರೆ ಗುಂಡಿ ಅಗೆಯಬಾರದು ಎನ್ನುವ ಮೌಢ್ಯಕ್ಕೆ ಜೋತು ಬಿದ್ದ ರುದ್ರಗೋಡ ಶೌಚಾಲಯ ನಿರ್ಮಾಣ ಮಾಡಿಸಿಲ್ಲ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಎನ್. ನಾಗರತ್ನ, ಕಂದಾಯ ಅಧಿಕಾರಿ ರಾಜು ಬಣಕಾರ್, ಆರೋಗ್ಯ ಅಧಿಕಾರಿ ಗುರುಪ್ರಸಾದ್ ಮತ್ತು ಪುರಸಭೆ ಸದಸ್ಯರು ರುದ್ರಗೌಡ ಮನೆ ಮುಂದೆ ಕುಳಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.
ಅಧಿಕಾರಿಗಳು ಮತ್ತು ಸದಸ್ಯರು ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ಗಳಿದ್ದು, ವಾರ್ಡ್ವಾರು ಬಯಲು ಮುಕ್ತ ಶೌಚಾಲಯ ಮಾಡಲು ಸಂಕಲ್ಪ ಮಾಡಿದ್ದಾರೆ. ಈಗಾಗಲೇ 14ನೇ ವಾರ್ಡ್ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದೆ. ಆದರೆ 4ನೇ ವಾರ್ಡ್ ನಲ್ಲಿ ರುದ್ರಗೌಡ ಮನೆಯಲ್ಲಿ ಶೌಚಾಲಯ ನಿರ್ಮಿಸಿದರೆ ಇಡೀ ವಾರ್ಡ್ ಬಯಲು ಮುಕ್ತ ಶೌಚಾಲವಾಗಲಿದೆ. ( ಇದನ್ನೂ ಓದಿ: ಎಳೇ ವಯಸ್ಸಿನಲ್ಲೇ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾಳೆ ಬಸವನಬಾಗೇವಾಡಿಯ ಪೃಥ್ವಿ )
ಕಳೆದ ಮೂರು ತಿಂಗಳಿನಿಂದ ರುದ್ರಗೌಡರ ಮನವೊಲಿಸಲು ಅಧಿಕಾರಿಗಳು ಮತ್ತು ಸದಸ್ಯರು ಯತ್ನಿಸಿ ವಿಫಲರಾಗಿದ್ದರು. ಆದ್ದರಿಂದ ಸತತ ಮೂರು ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ್ದಾರೆ. ಪರಿಣಾಮ ರುದ್ರಗೌಡ ಮುಜುಗರಕ್ಕೆ ಒಳಗಾಗಿದ್ದಾರೆ. ಸಂಜೆ ವೇಳೆಗೆ ಮನೆಯಿಂದ ಹೊರಬಂದ ರುದ್ರಗೌಡ ಶೌಚಗೃಹ ನಿರ್ಮಾಣ ಕಾರ್ಯ ಆರಂಭಿಸುವ ಭರವಸೆ ನೀಡಿದ್ದಾರೆ. ಭರವಸೆ ದೊರೆತ ಬಳಿಕ ಅಧಿಕಾರಿಗಳು ಸಂಜೆ ಧರಣಿ ವಾಪಸ್ ಪಡೆದಿದ್ದಾರೆ. ( ಇದನ್ನೂ ಓದಿ: ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಮಾವ, ಮೈದುನನ ವಿರುದ್ಧ ದೂರು ನೀಡಿದ ಸೊಸೆ )