– ಧರ್ಮಸ್ಥಳ, ಮೈಸೂರು, ಮಹದೇಶ್ವರ ಬೆಟ್ಟಕ್ಕೆ ಮಹಿಳೆಯರ ದಂಡು
ಬೆಂಗಳೂರು: ಕರ್ನಾಟಕದ (Karnataka) ಈಗಿನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ (Govt Bus) ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು (Shakti Scheme) ಜಾರಿಗೊಳಿಸಿ ಒಂದು ವಾರವಾಗಿದ್ದು, ಇಂದು ಮೊದಲ ವೀಕೆಂಡ್. ಈ ಹಿನ್ನೆಲೆ ದೂರದೂರುಗಳಿಗೆ, ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ದಂಡು ಸಾಗುತ್ತಿದೆ. ಹೆಚ್ಚಿನ ಕೆಎಸ್ಆರ್ಟಿಸಿ ಬಸ್ಗಳಲ್ಲಂತೂ (KSRTC Bus) ಕಾಲಿಡಲು ಸಾಧ್ಯವಾಗದಷ್ಟು ಫುಲ್ ರಶ್ ಆಗಿದೆ.
ಕೆಎಸ್ಆರ್ಟಿಸಿ ವೆಬ್ಸೈಟ್ ಕ್ರ್ಯಾಶ್:
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಮಹಿಳೆಯರು ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ ಫ್ರೀ ಟಿಕೆಟ್ ರಿಸರ್ವೇಶನ್ ಕೆಎಸ್ಆರ್ಟಿಸಿಯ ವೆಬ್ಸೈಟ್ ಕ್ರ್ಯಾಶ್ ಆಗಿದೆ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಾಗಿ ಮಹಿಳೆಯರೇ ಪ್ರಯಾಣ ಮಾಡುತ್ತಿದ್ದು, ಈ ಹಿನ್ನೆಲೆ 20 ರೂ. ನೀಡಿ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಏಕಕಾಲಕ್ಕೆ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಆಗುತ್ತಿರುವುದರಿಂದ ಸರ್ವರ್ ಡೌನ್ ಆಗಲು ಕಾರಣವಾಗುತ್ತಿದೆ. ಹಣ ಕಡಿತವಾದರೂ ಟಿಕೆಟ್ ಬುಕ್ ಆಗುತ್ತಿಲ್ಲ ಎಂದು ಹಲವು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆ ಸಾಮಾನ್ಯ ಬಸ್ಗಳಿಗೆ ಕೆಎಸ್ಆರ್ಟಿಸಿ ಆ್ಯಪ್ ಅಥವಾ ವೆಬ್ನಲ್ಲಿ ರಿಸರ್ವೇಶನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರ ದಂಡು:
ರಾಜ್ಯದ ವಿವಿಧ ಭಾಗಗಳಿಗೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಒಂದು ಬಸ್ನಲ್ಲಿ ಸೀಟ್ ಭರ್ತಿಯಾದರೆ ಅದರಿಂದ ಇಳಿದು ಇನ್ನೊಂದು ಬಸ್ ಹತ್ತುತ್ತಿದ್ದಾರೆ. ಮಹಿಳಾ ಪ್ರಯಾಣಿಕರು ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಕುಳಿತಿದ್ದು, ಇವರಲ್ಲಿ ಹೆಚ್ಚಿನವರು ಸಿಗಂದೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುವವರು ಇದ್ದಾರೆ. ನಾಳೆ ಭಾನುವಾರ ಆಗಿರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಜೆಸಿಬಿಗಳ ಘರ್ಜನೆ – ಬಿಬಿಎಂಪಿಯಿಂದ ಆಪರೇಷನ್ ರಾಜಕಾಲುವೆ
ಧರ್ಮಸ್ಥಳಕ್ಕೆ 10 ನಿಮಿಷಕ್ಕೊಂದು ಬಸ್ ವ್ಯವಸ್ಥೆ:
ಬೆಂಗಳೂರು ಬಸ್ ಡಿಪೋದಿಂದ ಧರ್ಮಸ್ಥಳಕ್ಕೆ 10 ನಿಮಿಷಕ್ಕೆ ಒಂದರಂತೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವ 5:30ರಿಂದಲೇ ಸಾವಿರಾರು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಾಸನ, ಕುಣಿಗಲ್, ಮಾಗಡಿ, ಚಿಕ್ಕಮಗಳೂರು, ಮಂಗಳೂರು ಡಿಪೋ ಸೇರಿದಂತೆ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಡಿಪೋ ಬಸ್ಗಳು ಧರ್ಮಸ್ಥಳಕ್ಕೆ ತೆರಳಿವೆ.
ಚಿಕ್ಕಬಳ್ಳಾಪುರ, ಮೈಸೂರಿಗೂ ಪ್ರಯಾಣಿಕರ ಸಾಗರ:
ಫ್ರೀ ಬಸ್ ಹಿನ್ನೆಲೆ ಆದಿಯೋಗಿ ಶಿವನ ಪ್ರತಿಮೆ ನೋಡಲು ಪ್ರವಾಸಿಗರ ದಂಡು ಚಿಕ್ಕಬಳ್ಳಾಪುರಕ್ಕೆ ಹರಿದಿದೆ. ವೀಕೆಂಡ್ ಹಿನ್ನೆಲೆ ಮೈಸೂರಿನ ಕಡೆಗೂ ಹೋಗುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಬಸ್ಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದರೂ ಅದರಲ್ಲೂ ಹೆಚ್ಚಿನ ವಿದ್ಯಾರ್ಥಿಗಳೇ ತೆರಳುತ್ತಿದ್ದಾರೆ. ಮೈಸೂರು, ನಂಜನಗೂಡು, ಮಲೆಮಹದೇಶ್ವರ ದೇವಾಲಯದ ಕಡೆಗೆ ಮಹಿಳಾ ಪ್ರಯಾಣಿಕರು ಹೆಚ್ಚಾಗಿದ್ದಾರೆ.
ಫ್ರೀ ಬಸ್ ಹಿನ್ನೆಲೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಜನಸಾಗರವೇ ಹರಿದಿದೆ. ಟಿಕೆಟ್ ಕೌಂಟರ್ ಬಳಿ ಮಹಿಳೆಯರು, ಯುವತಿಯರು ಉಚಿತ ಬಸ್ ಟಿಕೆಟ್ಗಾಗಿ ಆಧಾರ್ ಕಾರ್ಡ್ ಹಿಡಿದು ನಿಂತಿದ್ದಾರೆ. ಇದೀಗ ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಮೈಸೂರಿಗೆ 15 ನಾನ್ಸ್ಟಾಪ್ ಬಸ್ಗಳು ತೆರಳಿವೆ. ಮಲೆಮಹದೇಶ್ವರ ದೇವಾಲಯಕ್ಕೂ 9 ಬಸ್ಗಳು ತೆರಳಿವೆ. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್ಗೆ ರವಾನೆ!