– ಇಬ್ಬರ ನಡುವೆ ಮುಗಿಯದ ಸೋಷಿಯಲ್ ಮೀಡಿಯಾ ಮಾತಿನ ವಾರ್
ನವದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ (Kangana Ranaut) ಮತ್ತು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್(Saurav Das) ನಡುವಿನ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಕಂಗನಾ ನೀಡಿದ್ದ ಹೇಳಿಕೆಗಳ ಬಳಿಕ ಇಬ್ಬರ ನಡುವೆ ಮಾತಿನ ಸಮರ ಜೋರಾಗಿದೆ.
ಇತ್ತೀಚೆಗೆ ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಕಂಗನಾ ರನೌತ್ ಟೀಕೆ ಮಾಡಿದ್ದರು. ಪ್ರತಿಭಟನೆಯ ವೇಳೆ ಬಳಸಿದ ಭಾಷೆ ಮತ್ತು ವೈಯಕ್ತಿಕ ದಾಳಿಗಳು ಸಮಾಜಕ್ಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಭಟನೆಯ ವಿಡಿಯೊಗಳನ್ನು ಹಂಚಿಕೊಂಡು, ಅವುಗಳನ್ನು ವಾಂತಿ ಬರಿಸುವಂತಿವೆ ಎಂದು ಬಣ್ಣಿಸಿದ್ದರು.
ಈ ಹೇಳಿಕೆಗಳಿಗೆ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ತಿರುಗೇಟು ನೀಡಿದ್ದರು. ಕಂಗನಾ ರನೌತ್ ಅವರನ್ನು ಅವರದೇ ಪಕ್ಷದವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಯುವ ಪೀಳಿಗೆಯವರೂ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟೀಕಿಸಿದ್ದರು. ಸಂಸದೆಯಾಗಿ ಕೆಲಸ ಎಷ್ಟು ಕಷ್ಟ ಎಂಬುದನ್ನು ಅವರು ತಾವೇ ಒಪ್ಪಿಕೊಂಡಿದ್ದಾರೆ ಎಂದು ಕೂಡ ಹೇಳಿದ್ದರು.ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಗೆ ಭಾರೀ ಸ್ಪಂದನೆ, 48 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಲಾಭ – ಪ್ರಹ್ಲಾದ್ ಜೋಶಿ
ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ ರನೌತ್, ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. 28ನೇ ವಯಸ್ಸಿನಲ್ಲೇ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದೇನೆ. ತಾವು ಚಲನಚಿತ್ರ ನಿರ್ಮಾಪಕಿ, ನಟಿ, ನಿರ್ಮಾಪಕಿ, ಚಿತ್ರಕಥೆಗಾರ್ತಿ ಮತ್ತು ಉದ್ಯಮಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಆದರೆ, ಯಾವುದೇ ಕೆಲಸವಿಲ್ಲದವರಿಗೆ ಅದರ ಅರ್ಥ ಗೊತ್ತಾಗುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ.
ಇದರ ಜೊತೆಗೆ ಸೌರವ್ ದಾಸ್ಗೆ ನೇರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಿಯ ಸೌರವ್, ನಿಮ್ಮ ಸಮಸ್ಯೆ ವೈಯಕ್ತಿಕ. ನೀವು ವಿದ್ಯಾರ್ಥಿಯಲ್ಲ. ನೀವು ನಿಷ್ಪ್ರಯೋಜಕರು. ಮೊದಲು ಸ್ವಲ್ಪ ಕೌಶಲ್ಯ ಕಲಿಯಿರಿ. ಅಲ್ಲಿಂದಲೇ ಆರಂಭಿಸಿ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಈ ಇಬ್ಬರ ನಡುವಿನ ಮಾತಿನ ಸಮರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಎರಡೂ ಕಡೆಯ ಬೆಂಬಲಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುಪೂರ್ಣಿಮೆ ಸಂಭ್ರಮ – ಚಿನ್ನದ ಪಲ್ಲಕ್ಕಿಯಲ್ಲಿ ಮೃತ್ತಿಕೆ ಮೆರವಣಿಗೆ
