ಯಾದಗಿರಿ: ಜಿಲ್ಲೆಯ ಸುರುಪುರ ತಾಲೂಕಿನ ಬೂದಿಹಾಳ ಗ್ರಾಮದಲ್ಲಿರುವ ಒಂದು ವರ್ಷದ ಮಗುವಿನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಮೊದಲ ಪತ್ನಿಯ ಮಗಳಿಗೆ ಮುಂದೆ ಆಸ್ತಿ ಕೊಡಬೇಕಾಗುತ್ತದೆ ಎಂದು ತಂದೆ ತನ್ನ ಒಂದು ವರ್ಷದ ಮಗಳನ್ನು ಕೊಲೆ ಮಾಡಿರುವ ವಿಚಾರ ಪೊಲೀಸ್ ತನಿಖೆಯಿಂದ ಪ್ರಕಟವಾಗಿದೆ.
ಎರಡು ಮದುವೆಯಾಗಿರುವ ಕಾಶಿನಾಥ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿರುವ ತಂದೆ. ಭೂಮಿಕಾಳ ತಂದೆ ಕಾಶಿನಾಥ್ ಮತ್ತು ಅವನ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಕಾಶಿನಾಥ್ ಈ ಹಿಂದೆ ಲಕ್ಷ್ಮೀ ಎಂಬವರನ್ನು ಮದುವೆಯಾಗಿದ್ದ. ಭೂಮಿಕಾ ಜನಿಸಿದ ಮೇಲೆ ತಾಯಿ ಮಗಳನ್ನು ಕಾಶಿನಾಥ್ ಬಿಟ್ಟು ಬಂದಿದ್ದ. ಮೊದಲ ಪತ್ನಿಯಿಂದ ದೂರವಾದ ಕಾಶಿನಾಥ್, ಪಾರ್ವತಿ ಎಂಬವರನ್ನು ಎರಡನೇ ವಿವಾಹವಾಗಿದ್ದನು. ಎರಡನೇ ಮದುವೆಯ ನಂತ್ರ ಕಾಶಿನಾಥ್ ಮಂಗಳೂರಿನಲ್ಲಿ ನೆಲಸಿದ್ದನು. ಮೊದಲಿಗೆ ಭೂಮಿಕಾಳನ್ನು ಅಜ್ಜ-ಅಜ್ಜಿಯೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಭೂಮಿಕಾಳ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ತನಿಖೆಯಲ್ಲಿ ತಂದೆಯೇ ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಮನೆಯಂಗಳದಲ್ಲಿ ಮಲಗಿದ್ದ ಮಗಳು ಭೂಮಿಕಾಳನ್ನು ಏಪ್ರಿಲ್ 11ಕ್ಕೆ ಕಾಶಿನಾಥ್ ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿ, ಮಗಳ ದೇಹವನ್ನು ಗ್ರಾಮದ ಹೊರವಲಯದಲ್ಲಿ ಬಿಸಾಡಿಹೋಗಿದ್ದನು.