ಚಿತ್ರದುರ್ಗ: ಅದೊಂದು ಬರದ ನಾಡು. ಅಲ್ಲಿನ ಜನರು ಹನಿನೀರಿಗೂ ಪರದಾಡುತ್ತಿದ್ದರು. ಆದರೆ ವಾಣಿವಿಲಾಸ ಸಾಗರ ಜಲಾಶಯ (Vanivilasa Reservoir) ಭರ್ತಿಯಾಗಿರೋ ಹಿನ್ನೆಲೆ ಅಲ್ಲಿನ ರೈತರಲ್ಲಿ ಕಬ್ಬು (Sugarcane) ಬೆಳೆಯುವ ಉತ್ಸಾಹ ಮೂಡಿದೆ. ಹೀಗಾಗಿ ಮುಚ್ಚಿರೋ ಶುಗರ್ ಫ್ಯಾಕ್ಟರಿಯನ್ನು (Sugar Factory) ಆರಂಭಿಸುವಂತೆ ರೈತರು ಸರ್ಕಾರದ ಬೆನ್ನತ್ತಿದ್ದಾರೆ.
ವರ್ಷಗಳಿಂದ ಮುಚ್ಚಿರೋ ಸಕ್ಕರೆ ಕಾರ್ಖಾನೆ, ಸ್ವಚ್ಛತೆಯೇ ಕಾಣದೆ ಮುಳ್ಳಿನ ಗಿಡ ಬೆಳೆದ ಕಾರ್ಖಾನೆ ಆವರಣ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿನ ವಾಣಿವಿಲಾಸ ಸಕ್ಕರೆ ಕಾರ್ಖಾನೆ. 1976 ರಲ್ಲಿ ಈ ಭಾಗದ ರೈತರ ಕೈ ಬಲಪಡಿಸಲು ಸರ್ಕಾರ ಸಕ್ಕರೆ ಕಾರ್ಖಾನೆ ಆರಂಭಿಸಿತ್ತು. ಆದರೆ ಕಬ್ಬು ಪೂರೈಸಲಾಗದೇ 2002 ರಲ್ಲಿ ಮುಚ್ಚಲಾಯಿತು. ಅಂದಿನಿಂದ ಇಂದಿನವರೆಗೆ ಈ ಭಾಗದಲ್ಲಿ ಕಬ್ಬು ಬೆಳೆಯಲ್ಲವೆಂಬ ನೆಪವೊಡ್ಡಿ ಈ ಕಾರ್ಖಾನೆ ಆರಂಭಿಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಈ ಭಾಗದ ರೈತರು ಸತತ 10 ವರ್ಷಗಳಿಂದ ಯಾವುದೇ ಬೆಳೆ ಬೆಳೆದರೂ, ತೀವ್ರ ನಷ್ಟ ಅನುಭವಿಸಿ ಸುಸ್ತಾಗಿದ್ದಾರೆ.
ದಾಳಿಂಬೆ, ಅಡಿಕೆ ಸೇರಿದಂತೆ ಇತರ ಬೆಳೆಗಳು ರೈತರ ಕೈ ಸುಟ್ಟು, ಕೋಟೆನಾಡಿನ ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ. ಇಂತಹ ವೇಳೆ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ರೈತರಲ್ಲಿ ಕಬ್ಬು ಬೆಳೆಯುವ ಉತ್ಸಾಹ ಮೂಡಿದೆ. ಆದ್ದರಿಂದ ಸರ್ಕಾರವು ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಿ, ಈ ಭಾಗದ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ರೈತರ ಒತ್ತಡಕ್ಕೆ ಮಣಿದಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಹಿರಿಯೂರಿನ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಕ್ಕೆ ತಜ್ಞರ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸರ್ಕಾರ ಬದಲಾದ ಪರಿಣಾಮ ಆ ಆಶ್ವಾಸನೆ ಈಡೇರಿಲ್ಲ. ಅಲ್ಲದೇ ಈ ಭಾಗದಲ್ಲಿ ಬಹುತೇಕ ಜನರು ಕೂಲಿ ಕಾರ್ಮಿಕರಿದ್ದು, ಪ್ರತಿವರ್ಷ ಉದ್ಯೋಗ ಅರಸಿ, ವಿವಿಧೆಡೆಗೆ ಹೋಗುತ್ತಾರೆ. ಆದ್ದರಿಂದ ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆ ರೀ ಓಪನ್ ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದ್ಮಕ ಹೇಳಿಕೆ
ವಾಣಿವಿಲಾಸ ಸಾಗರ ಭರ್ತಿಯಾಗಿ ನೀರು ಭೋರ್ಗರೆಯುತ್ತಿರುವ ಪರಿಣಾಮ ಹಿರಿಯೂರಿನ ರೈತರು ಕಬ್ಬು ಬೆಳೆಯುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಇಲ್ಲಿನ ರೈತರ ಬವಣೆ ನೀಗಿಸಲು ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಪುನರ್ ಆರಂಭಿಸಿದರೆ ಕೋಟೆನಾಡಿನ ಅನ್ನದಾತರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ
Web Stories