ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದ್ದರಿಂದ ಸಾಲಮನ್ನಾ ವಿಚಾರದಲ್ಲಿ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಹೊಸ ಪ್ರಾದೇಶಿಕ ಸಾರಿಗೆ ಕಚೇರಿ ಉದ್ಘಾಟನೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಮನುಷ್ಯನನ್ನು ತೃಪ್ತಿ ಮಾಡಲು ಸಾಧ್ಯವಿಲ್ಲ, ಕುಮಾರಸ್ವಾಮಿ ಮಾಡಿದ ಸಾಲಮನ್ನಾದಷ್ಟು ಬೇರೆ ಯಾವುದೇ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಪನ್ಮೂಲಗಳನ್ನು ಸಂಗ್ರಹಿಸಿ ರೈತರ ಸಾಲಮನ್ನಾ ಮಾಡಿದೆ ಎಂದರು.
ಇದೇ ವೇಳೆ ಸಾಲಮನ್ನಾ ವಿಚಾರದಲ್ಲಿ ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ತೃಪ್ತಿ ಪಡುವುದು ಪಡದೇ ಇರುವುದು ರೈತರಿಗೆ ಬಿಟ್ಟದ್ದು. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದೆ. ಸಮ್ಮಿಶ್ರ ಸರ್ಕಾರವೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಸಾಲ ಮನ್ನಾ ಮಾಡಿದೆ. ಸಾಲಮನ್ನಾದಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆ ಅಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿ ಇಲಾಖೆಯಲ್ಲಿ ಉಂಟಾಗುತ್ತಿರುವ ಹಣದ ಸೋರಿಕೆಯನ್ನು ತಡೆಯಲಾಗುವುದು. ರಾಜ್ಯ ಬೇರೆ ಯಾವುದೇ ಇಲಾಖೆಯೂ ಸಹ ಇಷ್ಟು ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಿಲ್ಲ. ಅದ್ದರಿಂದ ಇಲಾಖೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವುದಾಗಿ ಹೇಳಿದರು.