ಬೆಂಗಳೂರು: ಬಸ್ ಡಿಕ್ಕಿಯಾಗಿ ಮಲ್ಲೇಶ್ವರ ಬಳಿಯ ಹರಿಶ್ಚಂದ್ರ ಘಾಟ್ ಬಳಿ ವಿದ್ಯಾರ್ಥಿನಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ (BMTC) ಸ್ಪಷ್ಟನೆ ನೀಡಿದೆ.
ಗಾಯತ್ರಿ ನಗರದ ಬಳಿ ವಿದ್ಯಾರ್ಥಿನಿ ಎಡಭಾಗದಿಂದ ಬಸ್ಸನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುತ್ತಿರುವಾಗ ಎದುರು ಬದಿಯಲ್ಲಿ ಆಟೋ (Auto) ಇದ್ದ ಕಾರಣ ದ್ವಿಚಕ್ರ ವಾಹನವು ಸ್ಕಿಡ್ ಆಗಿ ಬಸ್ಸಿನ ಎಡಭಾಗದ ಹಿಂದಿನ ಚಕ್ರಕ್ಕೆ ಆಯಾ ತಪ್ಪಿ ಬಿದ್ದಿದ್ದರಿಂದ ಘಟನೆ ಸಂಭವಿಸಿದೆ ಎಂದು ಬಿಎಂಟಿಸಿ ಹೇಳಿದೆ.
ಈ ಘಟನೆ ಎಲ್ಲಾ ದೃಶ್ಯಗಳು ಸಮೀಪದ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ಮತ್ತು ಬಸ್ಸಿನಲ್ಲಿ ಅಳವಡಿಸಲಾಗಿದ್ದ ಹಿಂಬದಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 850 ಅಡಿಕೆ ಮರ ಕಡಿದ ಕೇಸ್ಗೆ ಟ್ವಿಸ್ಟ್ – ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತಾ 25 ಲಕ್ಷ ಪೀಕಿತ್ತು ಕುಟುಂಬ
ಏನಿದು ಘಟನೆ?
ಬೆಂಗಳೂರಿನ (Bengaluru) ಹರಿಶ್ಚಂದ್ರ ಘಾಟ್ ಬಳಿ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ 20 ವರ್ಷದ ಕುಸುಮಿತ ಬಿಎಂಟಿಸಿ ಬಸ್ಸಿಗೆ ಬಿದ್ದು ಸಾವನ್ನಪ್ಪಿದ್ದಳು.
ಇಂದು ಬೆಳಗ್ಗೆ 8.30 ಗಂಟೆ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಬಸ್ಸಿನ ಅಡಿಗೆ ಬಿದ್ದು ಮೃತಪಟ್ಟಿದ್ದಳು. ಬಿಎಂಟಿಸಿ ಬಸ್ ಚಾಲಕ ಅತಿವೇಗವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಗೆ ವಿದ್ಯಾರ್ಥಿನಿ ಮೃತದೇಹ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.