ಮುಂಬೈ: ಮಹಾರಾಷ್ಟ್ರದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣವೂ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ʻಮಹಾವಿಕಾಸ ಆಘಾಡಿʼ ಮೈತ್ರಿಕೂಟದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಆಶಯವನ್ನು ಉದ್ಧವ್ ಠಾಕ್ರೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನೆಯ ಏಕನಾಥ್ ಶಿಂಧೆ ಅವರು ಮುಂದಿನ ಸಿಎಂ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಂಡಾಯ ಶಮನ ಮಾಡಲು ಏಕನಾಥ ಶಿಂಧೆ ಅವರನ್ನೇ ರಾಜ್ಯದ ಮುಖ್ಯಮಂತ್ರಿ ಮಾಡುವ ಕುರಿತು ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಎನ್ಸಿಪಿ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಎಂ ಅಧಿಕೃತ ನಿವಾಸ ತೊರೆದ ಉದ್ದವ್ ಠಾಕ್ರೆ
ಮಹಾರಾಷ್ಟ್ರ ಸರ್ಕಾರ ಉರುಳುವ ಸನ್ನಿವೇಶ ಎದುರಾಗಿರುವ ಸಂದರ್ಭದಲ್ಲಿ ಸಿಎಂ ಉದ್ಧವ್ ಠಾಕ್ರೆ ಇಂದು ಪಕ್ಷದ ಶಾಸಕರ ಭಾವನಾತ್ಮಕವಾಗಿ ಮಾತನಾಡಿದರು. ಸಿಎಂ ಹಾಗೂ ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ತಿಳಿಸಿದ್ದರು.
ನಾನು ಸಿಎಂ ಆಗಿರುವುದು ನಮ್ಮ ಜನರಿಗೇ ಬೇಡವಾದರೆ, ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನಾನು ಬಾಳಸಾಹೇಬ್ ಅವರ ಮಗ. ನಾನು ಸ್ಥಾನಕ್ಕಾಗಿ ಎಂದೂ ಆಸೆಪಟ್ಟವನಲ್ಲ ಎಂದು ಠಾಕ್ರೆ ಮಾತನಾಡಿದ್ದಾರೆ. ಇದನ್ನೂ ಓದಿ: ಶಿವಸೇನೆಯ ಉಳಿವಿಗಾಗಿ ಮೈತ್ರಿಯಿಂದ ಹೊರಬರುವುದು ಅನಿವಾರ್ಯ: ಏಕನಾಥ್ ಶಿಂಧೆ
ಇದಾದ ಕೆಲವೇ ಹೊತ್ತಿನಲ್ಲಿ ಅಧಿಕೃತ ಸಿಎಂ ನಿವಾಸವನ್ನು ಉದ್ಧವ್ ಠಾಕ್ರೆ ತೊರೆದರು. ಈ ಬೆಳವಣಿಗೆಗಳು ಅವರು ರಾಜೀನಾಮೆ ನೀಡುವ ಕುರಿತು ಮುನ್ಸೂಚನೆಯಂತಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಏಕನಾಥ್ ಶಿಂಧೆ, ಪಕ್ಷ ಮತ್ತು ಕಾರ್ಯಕರ್ತರನ್ನು ಉಳಿಸಲು ಶಿವಸೇನೆಯು ಎನ್ಸಿಪಿ ಮತ್ತು ಕಾಂಗ್ರೆಸ್ನೊಂದಿಗಿನ ಅಸ್ವಾಭಾವಿಕ ಮೈತ್ರಿಯಿಂದ ಹೊರಬರುವುದು ಅತ್ಯವಶ್ಯಕ ಎಂದು ತಮ್ಮ ನಿಲುವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.