ನೆಲಮಂಗಲ: ದಟ್ಟವಾದ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆ ಸರಣಿ ಅಪಘಾತ ನಡೆದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಟಿ.ಬೇಗೂರು ಬಳಿ ನಡೆದಿದೆ.
ದಟ್ಟವಾದ ಮಂಜು ಕವಿದಿದ್ದ ವೇಳೆ ಲಾರಿಯೊಂದು ಬ್ರೇಕ್ ಹಾಕಿದ್ದರಿಂದ ಹಿಂದುಗಡೆಯಿಂದ ಬರುತ್ತಿದ್ದ ಎರಡು ಬಸ್, ಎರಡು ಕಾರು, ಎರಡು ಲಾರಿ ಮತ್ತು ಒಂದು ಜೀಪ್ ಕೂಡ ಅಪಘಾತಕ್ಕೆ ಒಳಗಾಗಿವೆ. ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ದೂರ ಟ್ರಾಫಿಕ್ ಜಾಮ್ ಆಗಿ ಸಂಚಾರ ಅಸ್ತವ್ಯಸ್ತವಾಯಿತು. ಇದನ್ನೂ ಓದಿ: ಹಗಲು ಹೊತ್ತಿನಲ್ಲೇ ಬ್ಯಾಂಕ್ ದರೋಡೆ – ಸಿಬ್ಬಂದಿ ಹತ್ಯೆ
ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ದೌಡಾಯಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಅಪಘಾತದಲ್ಲಿ 9 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕನೊಬ್ಬ ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದಾನೆ.
ಭೀಕರ ಅಪಘಾತದಿಂದಾಗಿ ಕ್ಯಾಂಟರ್ ನಲ್ಲಿದ್ದ ಈರುಳ್ಳಿ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ವಾರ್ ದ್ವೇಷಕ್ಕೆ ಇಬ್ಬರು ಮಕ್ಕಳು ಸೇರಿ 8 ಮಂದಿ ಬಲಿ