ಬೆಂಗಳೂರು: ರಾಜ್ಯದಲ್ಲಿ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸಬಾರದು ಎಂದು ಟ್ರೇಡ್ ಯೂನಿಯನ್ ಗಳ ಜಂಟಿ ಸಮಿತಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಸಿಐಟಿಯು (CITU) ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಈ ವಿಚಾರವಾಗಿ ಚರ್ಚೆ ನಡೆಸಿತು. ಇದನ್ನೂ ಓದಿ: ಮಹಿಳೆಯರಿಂದ ಶೋಷಣೆಗೆ ಒಳಗಾಗ್ತಿದ್ದಾರೆ, ರಾಜ್ಯದಲ್ಲಿ `ಪುರುಷ ಆಯೋಗ’ ರಚನೆಯಾಗಬೇಕು: ವಿಶ್ವನಾಥ್
ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಕನಿಷ್ಠ ವೇತನ ಪರಿಷ್ಕರಣೆ ನಡೆಸಲು ಮುಂದಾಗಿರುವುದು ಆಘಾತ ಉಂಟು ಮಾಡಿದೆ. ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಯಾವುದೇ ಕ್ರಮವನ್ನು ನಿಲ್ಲಿಸಿ ಕಾರ್ಮಿಕರ ಪರವಾಗಿ ಸರ್ಕಾರ ನಿಲ್ಲಬೇಕು ಎಂದು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿ ಪತ್ರದಲ್ಲಿ ಕೋರಲಾಗಿದೆ.

ರಾಜ್ಯದಲ್ಲಿ 2017-18 ರಿಂದಲೇ ಕನಿಷ್ಠ ವೇತನ ಪರಿಷ್ಕರಣೆ ಬಾಕಿ ಉಳಿದಿತ್ತು. ದೀರ್ಘಕಾಲದ ಬಳಿಕ 39 ನಿಗದಿಪಡಿಸಿದ ಉದ್ಯೋಗಗಳ ವೇತನವನ್ನು ಸುಮಾರು 8 ವರ್ಷಗಳ ನಂತರ ಪರಿಷ್ಕರಿಸಲಾಗಿದೆ. ಈ ವಿಳಂಬವು ಕನಿಷ್ಠ ವೇತನ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆಯಾಗಿದೆ. ಅಲ್ಲದೇ, ಮಾಲೀಕರು ವಾದಿಸುತ್ತಿರುವಂತೆ ವೇತನದ ಹೆಚ್ಚಳವು ಶೇ. 60 ರಷ್ಟಿಲ್ಲ, ಬದಲಿಗೆ ಕೇವಲ ಶೇ. 40 ರಷ್ಟಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ವೇತನ ಪರಿಷ್ಕರಣೆಯನ್ನ ತ್ಯಂತ ವೈಜ್ಞಾನಿಕವಾಗಿ ಮಾಡಲಾಗಿದೆ ಎಂದು ಸಂಘಟನೆಗಳು ತಿಳಿಸಿವೆ. ಏಪ್ರಿಲ್ 2025 ರಲ್ಲಿ ಕರಡು ಅಧಿಸೂಚನೆ ಹೊರಡಿಸಿ (ಪ್ರಸ್ತಾವಿತ ದರಗಳು: ರೂ. 19,300 ರಿಂದ ರೂ. 31,114) ಆಕ್ಷೇಪಣೆಗಳಿಗೆ ಅವಕಾಶ ನೀಡಲಾಗಿತ್ತು. 15ನೇ ಭಾರತೀಯ ಕಾರ್ಮಿಕ ಸಮ್ಮೇಳನದ (1956) ಮಾನದಂಡಗಳ ಆಧಾರದ ಮೇಲೆ ಬೆಲೆಗಳನ್ನು ಲೆಕ್ಕಹಾಕಲಾಗಿದ್ದು, ಇದಕ್ಕೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ಮಾನ್ಯತೆಯೂ ಇದೆ. ವೇತನ ಸಂಹಿತೆ 2019 ರ ಸೆಕ್ಷನ್ 69 ರ ಅಡಿಯಲ್ಲಿ ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: 3 ಬೂತ್ಗಳಲ್ಲಿ ಹೆಚ್.ಕೆ. ಪಾಟೀಲ್ ಹೆಸರು; SIR ಪಾರದರ್ಶಕವಾಗಲು ಹೇಗೆ ಸಾಧ್ಯ? – ಬೊಮ್ಮಾಯಿ ಆರೋಪ
ಈ ಪರಿಷ್ಕರಣೆಯಿಂದಾಗಿ ಕೆಪಿಟಿಸಿಎಲ್ ನಂತಹ ಪ್ರಮುಖ ಸಂಸ್ಥೆಗಳು, ಮಂಡಳಿಗಳು ಹಾಗೂ ಖಾಸಗಿ ಉದ್ಯೋಗದಾತರು ಈಗಾಗಲೇ ಹೊಸ ದರಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ರಾಜ್ಯದ 1 ಕೋಟಿಗೂ ಹೆಚ್ಚು ಶ್ರಮಿಕ ವರ್ಗದ ಕುಟುಂಬಗಳ ಆದಾಯ ನೇರವಾಗಿ ಹೆಚ್ಚಲಿದ್ದು, ಜನರ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕತೆ ಸುಧಾರಿಸಲಿದೆ. ಸುಮಾರು 3.8 ಲಕ್ಷ ಗುತ್ತಿಗೆ/ಹೊರಗುತ್ತಿಗೆ ನೌಕರರಿಗೆ ವಾರ್ಷಿಕ 3,200 ಕೋಟಿ ರೂ. ವೆಚ್ಚವಾಗಲಿದ್ದು, ಇದು ರಾಜ್ಯದ ಬಜೆಟ್ಗೆ ಹೋಲಿಸಿದರೆ ಅತ್ಯಂತ ಅಲ್ಪ ಭಾಗವಾಗಿದೆ ಎಂದು ಸಮಿತಿ ವಿವರಿಸಿದೆ.
ಉದ್ಯೋಗದಾತರ ಮನವಿಗೆ ಸರ್ಕಾರ ಸ್ಪಂದಿಸಬಾರದು. ಈ ಕನಿಷ್ಠ ವೇತನ ಪರಿಷ್ಕರಣೆಯನ್ನ ಮರುಪರಿಶೀಲಿಸಲು ಮುಂದಾಗಬಾರದು ಎಂದು ಐಎನ್ ಟಿಯುಸಿ, ಎಐಟಿಯುಸಿ, ಸಿಐಟಿಯು, ಎಚ್ ಎಂಎಸ್ ಸೇರಿದಂತೆ ಪ್ರಮುಖ ಕಾರ್ಮಿಕ ಸಂಘಟನೆಗಳ ಮುಖಂಡರು ಜಂಟಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: 70 ಲಕ್ಷ ಪಡೆದು ಉದ್ಯಮಿಗೆ ವಂಚನೆ, ಹಣ ವಾಪಸ್ ಕೇಳಿದ್ರೆ ರೇಪ್ ಕೇಸ್ ದಾಖಲಿಸೋದಾಗಿ ಬೆದರಿಕೆ – ಮಹಿಳೆ ಅರೆಸ್ಟ್
