ಬೆಂಗಳೂರು: ಕಡಲೆಕಾಯಿ ಪರಿಷೆ (Kadalekai Parishe) ಹೆಸರಿನಲ್ಲಿ ನಿಯಮ ಮೀರಿ ಸುಂಕ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ `ಪಬ್ಲಿಕ್ ಟಿವಿ’ ಪ್ರಸಾರ ಮಾಡಿದ ವರದಿ ಫಲಶೃತಿ ನೀಡಿದೆ.
ದೇವಾಲಯದ ಆವರಣದ ಹೊರಗೆ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬಳಿ 500 ರೂ. ಹಣ ಪಡೆದು ರಶೀದಿ ನೀಡಲಾಗಿತ್ತು. ಈ ಬಗ್ಗೆ ನಿರಂತರ ವರದಿಯ ಬಳಿಕ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕ್ರಮಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ಆ ಕೊಠಡಿಗೆ ಹೋಗಲ್ಲ: ಎಸ್ಆರ್ ವಿಶ್ವನಾಥ್ ಮುನಿಸು
ರಶೀದಿಯ ಮೇಲೆ ದೊಡ್ಡ ಬಸವನಗುಡಿ (Basavanagudi) ದೇವಸ್ಥಾನ, ಕಡಲೆಕಾಯಿ ಪರಿಷೆ ಎಂದು ಮುದ್ರಣಗೊಂಡಿದೆ. ಈ ಬಗ್ಗೆ ವಿಚಾರಿಸಿದಾಗ ಪ್ರಸಾದ್ ಎಂಬವರಿಗೆ 2-3 ಲಕ್ಷಕ್ಕೆ ಬಿಡ್ ನೀಡಲಾಗಿದೆ. ಒಂದು ದಿನ ಮಾತ್ರ ಹಣ ವಸೂಲಿಗೆ ಅವಕಾಶ ಇದ್ದು, ಬಿಡ್ ನೀಡಿದ ಮಾತ್ರಕ್ಕೆ 500, 200 ರೂ. ಕಲೆಕ್ಟ್ ಮಾಡುವ ಹಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವುದಾಗಿ ದೊಡ್ಡ ಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ್ ಬಾಬು ಮಾಹಿತಿ ನೀಡಿದ್ದಾರೆ.
ಬೆಳಗ್ಗೆಯಿಂದ ದುಡಿದರೂ 500 ರೂ. ದುಡಿಮೆ ಆಗುವುದಿಲ್ಲ. ಹೀಗಿರುವಾಗ 500 ರೂ. ಕೊಡಬೇಕು ಎಂದು ಬರುತ್ತಾರೆ. ನೂಕುವ ಗಾಡಿಯಲ್ಲಿ ವ್ಯಾಪಾರ ಮಾಡುವವನಿಗೆ 200 ರೂ. ವಸೂಲಿ ಮಾಡುತ್ತಾರೆ ಎಂದು ವ್ಯಾಪಾರಿಗಳು `ಪಬ್ಲಿಕ್ ಟಿವಿ’ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ವರದಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಸುಂಕ ವಸೂಲಿ ಮಾಡಲು ಅವರ್ಯಾರು? ಉಚಿತವಾಗಿ ವ್ಯಾಪಾರ ಮಾಡಲು ಅವಕಾಶ ಇದೆ. ಹಣ ವಸೂಲಿ ಮಾಡಿದವರನ್ನು ಅಮಾನತು ಮಾಡ್ತೇನೆ. ಕಡಲೆಕಾಯಿ ಪರೀಷೆ ವಿಚಾರವಾಗಿ ಇಓ ಬಳಿ ಮಾತಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ – ಸಂಜಯ್ ರಾವತ್ ವಿರುದ್ಧ ದೇಶದ್ರೋಹದ ಕೇಸ್