ಚಿತ್ರದುರ್ಗ: ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ನಾಳೆಯೇ ಸಿಎಂ (CM) ಆಗಬೇಕೆಂಬ ತವಕವಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಹೇಳಿದರು.
ಚಿತ್ರದುರ್ಗದ (Chitradurga) ಕೊಳಾಳ್ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ (Siddaramaiah) ಅಧಿಕಾರದಲ್ಲಿ 2 ದಿನ ಇರ್ತೀನೋ ಬಿಡ್ತೀನೋ ಎಂಬ ಭಾವವಿದೆ. ಅಲ್ಲದೇ ಕಾಂಗ್ರೆಸ್ನಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಸ್ಪರ್ಧೆ ನಡೆಯುತ್ತಿದ್ದು, ಅಧಿಕಾರದ ದಾಹ ಹೆಚ್ಚಾಗಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ಈ ಸರ್ಕಾರಕ್ಕೆ ಜನರ ಹಿತ ಕಾಪಾಡುವಲ್ಲಿ ಕಾಳಜಿಯೇ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕಾವೇರಿ ನೀರು ಈಗಲೂ ತಮಿಳುನಾಡಿಗೆ ಹರಿಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಶಿವಮೊಗ್ಗ, ಕೋಲಾರದಲ್ಲಿ ಖಡ್ಗ ಹಿಡಿದು ಟಿಪ್ಪು ಮೆರವಣಿಗೆ ನಡೆದಿದ್ದು, ಕೋಮು ಭಾವನೆ ಕೆರಳಿಸುವ ಮತ್ತು ದ್ವೇಷ ಭಾವನೆ ಹಬ್ಬಿಸುವ ಕೆಲಸಕ್ಕೆ ಸರ್ಕಾರದ ರಕ್ಷಣೆ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಎಲ್ಲೆಡೆ ಬರ ತಾಂಡವವಾಡ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ 17 ತಂಡ ರಚಿಸಿಕೊಂಡು ಬರ ಅಧ್ಯಯನ ನಡೆಸುತ್ತಿದೆ. ಇಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ನಮ್ಮ ತಂಡ ಅಧ್ಯಯನ ನಡೆಸಲಿದ್ದು, ಈ ಭಾಗದಲ್ಲಿ ಜೋಳ, ಮೆಕ್ಕೆಜೋಳ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಓರ್ವ ರೈತ ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದು, ಆತನಿಗೆ 2 ಸಾವಿರ ರೂ. ಕೂಡ ಕೈಗೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರವೇ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು, ನೀರು ಪೂರೈಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದ ರೈತರು, ಸಾಕಿ ಸಲಹಿದ ದನ-ಕರುಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಬದುಕನ್ನು ಕಟ್ಟಿಕೊಳ್ಳಲು, ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯದ ಸಿಎಂ, ಡಿಸಿಎಂ, ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಗುತ್ತಿಗೆದಾರರ ಹಣ ಬಿಡುಗಡೆಗೊಳಿಸಿ, ಆ ಹಣ ಪಡೆಯುವಲ್ಲಿ ತಲ್ಲೀನರಾಗಿದ್ದಾರೆಂದು ಆರೋಪಿಸಿದರು. ಇದನ್ನೂ ಓದಿ: ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆ – ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಿಜೆಪಿ ಸಂಸದ
ಸರ್ಕಾರದಿಂದ ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸುವ ಚಟುವಟಿಕೆ ನಡೆದಿಲ್ಲ. ಬಿಜೆಪಿ ಅಧ್ಯಯನದ ಬಳಿಕ ಸರ್ಕಾರ ಎಚ್ಚೆತ್ತು ಜಿಲ್ಲಾ ಸಚಿವರಿಗೆ ಪ್ರವಾಸ ಮಾಡಲು ಸಿಎಂ ಸೂಚಿಸಿದ್ದು, ಪ್ರತಿ ಜಿಲ್ಲೆಗಳಿಗೆ 5, 10, 12 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಈವರೆಗೆ ಜಿಲ್ಲೆಗೆ ತಲುಪಿಲ್ಲ. ಹಣ ನೀಡುವುದಾಗಿ ಘೋಷಿಸಿದ್ದಾರಷ್ಟೇ ಎಂದು ಕಿಡಿಕಾರಿದರು.
ನಮ್ಮ ಬಿಜೆಪಿ ಸರ್ಕಾರದಲ್ಲಿ ಸಮರ್ಪಕ ವಿದ್ಯುತ್ ಪೂರೈಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯುತ್ ಕಡಿತದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ವಿದ್ಯುತ್ ಆನ್ ಹಾಗೂ ಆಫ್ ಮಾಡುವ ವೇಳೆ ರೈತರಿಗೆ ಸಮಸ್ಯೆಯಾಗುತ್ತಿದ್ದು, ಕಾಡು ಪ್ರಾಣಿಗಳಿಂದ ರೈತರಿಗೆ ಅನೇಕ ಕಡೆ ಸಮಸ್ಯೆ ಉದ್ಭವವಾಗಿದೆ. ಹೀಗಾಗಿ ನಿರಂತರ 7 ಗಂಟೆ ವಿದ್ಯುತ್ ಅನ್ನು ರೈತರ ಜಮೀನಿಗೆ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ
ಕೇಂದ್ರ ಸರ್ಕಾರ ಈಗಾಗಲೇ ಅಧಿಕಾರಿಗಳಿಂದ ಬರ ಅಧ್ಯಯನ ನಡೆಸಿದೆ. ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳು ವರದಿ ನೀಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ಮಾಡಿ ತೋರಿಸಲಾಗುತ್ತಿದೆ. 2014 ರಿಂದ 23 ರವರೆಗೆ 13.488 ಕೋಟಿ ರೂ. ಹಣ ಬಂದಿದೆ. ಆದರೂ ಕೇಂದ್ರದತ್ತ ಬೆರಳು ಮಾಡುವ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮೋದಿ ಸರ್ಕಾರ ರಾಜ್ಯಕ್ಕೆ ಯಾವತ್ತೂ ಅನ್ಯಾಯ ಮಾಡಿಲ್ಲ. ಸಿದ್ದರಾಮಯ್ಯ ಈ ರೀತಿ ಆಡಳಿತ ಮಾಡಿದರೆ ಜನ ಸಹಿಸಲ್ಲ. ಮುಂದಿನ ದಿನಗಳಲ್ಲಿ ಜನ ಸೂಕ್ತ ಉತ್ತರ ಕೊಡುತ್ತಾರೆ ಎಂದರು.