ಕೊಪ್ಪಳ: ಪಂಪಸೆಟ್ಗಳಿಗೆ ಮೂಲಭೂತ ಸೌಕರ್ಯ ನೀಡುವುದನ್ನು ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಸಚಿವರ ಭರವಸೆ ಹಿನ್ನೆಲೆಯಲ್ಲಿ ಇದೀಗ ಸಂಸದ ಕರಡಿ ಸಂಗಣ್ಣ (Karadi Sanganna) ಉಪವಾಸ ಅಂತ್ಯಗೊಳಿಸಿದ್ದಾರೆ.
ಸರ್ಕಾರ ಸೆಪ್ಟೆಂಬರ್ 22 ರಿಂದ ಪಂಪಸೆಟ್ಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಯನ್ನು ಸ್ಥಗಿತ ಮಾಡಿದೆ. ಸರ್ಕಾರದ ಈ ನಡೆಯನ್ನು ಖಂಡಿಸಿ ಸಂಸದ ಸಂಗಣ್ಣ ಕರಡಿ ನಿನ್ನೆ (ಸೋಮವಾರ) ಬೆಳಿಗ್ಗೆಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಆದರೆ ಇಂದು (ಮಂಗಳವಾರ) ಸಚಿವ ಶಿವರಾಜ ತಂಗಡಗಿ ಭರವಸೆ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ಇದನ್ನೂ ಓದಿ: ಹೆಬ್ಬಾಳ್ಕರ್ಗೆ ಠಕ್ಕರ್ ನೀಡಲು ಸತೀಶ್ ಜಾರಕಿಹೊಳಿ ಪ್ಲ್ಯಾನ್
ನಿನ್ನೆ ಬೆಳಿಗ್ಗೆಯಿಂದ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ರಾತ್ರಿ ಸಹ ಟೆಂಟ್ನಲ್ಲಿಯೇ ಮಲಗಿದ್ದರು. ಸಚಿವರಾದ ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ ಸಂಸದ ಸಂಗಣ್ಣರನ್ನ ಮನವೊಲಿಸುವ ಪ್ರಯತ್ನ ಮಾಡಿದರು. ಬಳಿಕ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸಹ ಸತ್ಯಾಗ್ರಹದ ಸ್ಥಳಕ್ಕೆ ಬಂದು ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಆದರೆ ಸರ್ಕಾರದ ಆದೇಶದ ಬಳಿಕವಷ್ಟೇ ನಾನು ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದರು.
ಇದಾದ ಬಳಿಕ ಸಚಿವ ಶಿವರಾಜ ತಂಗಡಗಿ ಸಿಎಂ ಸಿದ್ದರಾಮಯ್ಯಗೆ ಫೋನ್ ಮಾಡಿ, ನ.9 ರಂದು ನಡೆಯುವ ಕ್ಯಾಬಿನೆಟ್ನಲ್ಲಿ ಈ ಹಿಂದಿನಂತೆ ಆದೇಶ ಮಾಡುವ ಭರವಸೆ ನೀಡಿದ ಬಳಿಕ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ನ.9 ರಂದು ಆದೇಶ ಬರದಿದ್ದರೆ ಮುಂದಿನ ದಿನಗಳಲ್ಲಿ ಮತ್ತೇ ಹೋರಾಟ ಮಾಡುವ ಕೂಗು ಸಹ ಕೇಳಿಬಂದಿತು. ಇದನ್ನೂ ಓದಿ: ಎಫ್ಡಿಎ ಪ್ರಕರಣದಲ್ಲಿ ಯಾವುದೇ ವಿಳಂಬ ಇಲ್ಲ, ಬಿಜೆಪಿಯವ್ರು ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ: ಪ್ರಿಯಾಂಕ್ ಖರ್ಗೆ ತಿರುಗೇಟು
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸರ್ಕಾರ ನ.9 ರಂದು ಈ ಹಿಂದಿನಂತೆ ಆದೇಶ ಮಾಡಬೇಕೆಂದು ಆಗ್ರಹಿಸಿದರು. ಈಚೆಗಷ್ಟೇ ಸರ್ಕಾರ ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗೆ ಬ್ರೇಕ್ ಹಾಕಿತ್ತು.