ಯಾದಗಿರಿ: ಎಫ್ಡಿಎ ಪರೀಕ್ಷೆಯ (FDA Exam) ಅಕ್ರಮ ನಡೆದ ಬಳಿಕ ಆರ್ಡಿ ಪಾಟೀಲ್ (RD Patil) ಲೊಕೇಷನ್ ಬೇರೆ ಬೇರೆ ರಾಜ್ಯಗಳಲ್ಲಿ ತೋರಿಸುತ್ತಿತ್ತು. ಹಿಂದೆ ಎಲ್ಲೆಲ್ಲಿ ಹೋಗಿದ್ರು, ಯಾರ ಜೊತೆ ಸಂಪರ್ಕದಲ್ಲಿದ್ರು ಎಲ್ಲವನ್ನು ಹುಡಕಲಾಗ್ತಿದೆ ಎಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದ ನಾಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಆರ್ಡಿ ಪಾಟೀಲ್ ಬಂಧನ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿನ್ನೆ ಆರ್ಡಿ ಪಾಟೀಲ್ ಲೊಕೇಷನ್ ಕಲಬುರಗಿಯಲ್ಲಿ ತೋರಿಸಿದೆ. ನಿನ್ನೆ ರಾತ್ರಿ ಮೊಬೈಲ್ ಸಿಕ್ಕಿದೆ. ಅದನ್ನು ನೋಡಿಕೊಂಡು ತನಿಖೆ ನಡೆಸುತ್ತೇವೆ. ನ್ಯಾಯಾಂಗ ತನಿಖೆಗೆ ನೀಡುವ ವಿಚಾರವನ್ನು ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಈ ಪ್ರಕರಣ ನಮ್ಮ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಬಹಳ ಜಿಲ್ಲೆಯಲ್ಲಿ ನಡೆದಿದೆ. ಗೃಹ ಸಚಿವರು ಯಾದಗಿರಿ, ವಿಜಯಪುರ, ಕಲಬುರಗಿ, ಹುಬ್ಬಳ್ಳಿ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಕಲೆ ಹಾಕುತ್ತಾರೆ. ನಂತರ ಏನು ಕ್ರಮ ಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಕಿಂಗ್ ಪಿನ್ ಆರ್ಡಿ ಪಾಟೀಲ್ ಆಂಡ್ ಗ್ಯಾಂಗ್ ಕಾಂಗ್ರೆಸ್ ಕೈಗೊಂಬೆ ಎಂಬ ಶಾಸಕ ವಿಜಯೇಂದ್ರ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲ. ಅವರ ಪಕ್ಷದ ಶಾಸಕರೇ ಶಾಸಕರ ಭವನದಲ್ಲಿ ದುಡ್ಡು ತೆಗೆದುಕೊಂಡಿದ್ದು ಮಾಧ್ಯಮದಲ್ಲಿ ನೋಡಿದ್ದೀರಿ. ಅವರ ಅಂದಿನ ಹೋಂ ಮಿನಿಸ್ಟರ್ ಅವ್ರೆ ಪಿಎಸ್ಐ ಹಗರಣದ ಪ್ರಮುಖ ಆರೋಪಿ ಮನೆಗೆ ಹೋಗಿದ್ರು. ಆರೋಪಿ ಮನೆಯಲ್ಲಿ ಗೋಡಂಬಿ, ದ್ರಾಕ್ಷಿ, ಬಾದಾಮಿ ತಿನ್ಕೊಂಡು ಬಂದಿದ್ದು ನೋಡಿದ್ದೀರಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಮೊದ್ಲು ಕೇಂದ್ರದ ಬಳಿ ಹಣ ಕೊಡಿಸಲಿ- ಬಿಜೆಪಿ ಬರ ಅಧ್ಯಯನಕ್ಕೆ ಸಿಎಂ ಕಿಡಿ
ಒಬ್ಬ ಮಾಜಿ ಸಚಿವರು, ಹಾಲಿ ಶಾಸಕರು ಆರೋಪಿಗಳನ್ನು ಬಂಧನದಿಂದ ಬಿಡುಗಡೆ ಮಾಡಿ ಅಂತ ಪೋನ್ ಮಾಡಿ ಹೇಳಿದ್ರು. ಸ್ವಲ್ಪ ವಿಜಯೇಂದ್ರ ಅವ್ರು ಹೋಂ ವರ್ಕ್ ಮಾಡ್ಕೊಂಡು ಮಾತಾಡಿದ್ರೆ ಚೆನ್ನಾಗಿರುತ್ತೆ. ಪರೀಕ್ಷಾ ಸಮಯದಲ್ಲಿ ಕೂಡಾ ಮಾಡಿದ್ದೀವಿ. ನಾವು ಪರೀಕ್ಷೆಯಲ್ಲಿ ಅಕ್ರಮವಾದಾಗ ಸುಮ್ಮನೆ ಕುಳಿತಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹಾರಿಸೋದು ಬಿಡಬೇಕು. ಇದರ ಬಗ್ಗೆ ಸಿಎಂ ಹಾಗೂ ಗೃಹ ಸಚಿವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಆದಾಯ ಮೀರಿ ಆಸ್ತಿ – ಸಿಬಿಐ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ