ಚಿಕ್ಕಬಳ್ಳಾಪುರ: ತಮ್ಮ ಕ್ಷೇತ್ರ ಚಿಕ್ಕಬಳ್ಳಾಪರದಲ್ಲಿ ಮೆಡಿಕಲ್ ಕಾಲೇಜು ಶಂಕು ಸ್ಥಾಪನೆ ಮಾಡಿಯೇ ಮಾಡುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅನರ್ಹ ಶಾಸಕ ಸುಧಾಕರ್ ಸವಾಲು ಹಾಕಿದ್ದಾರೆ.
ಡಿ.ಕೆ.ಶಿವಕುಮಾರ್ ಓರ್ವ ಹೋರಾಟಗಾರ ಅನ್ನೋದನ್ನು ಒಪ್ಪುತ್ತೇನೆ. ಜೀವ ಉಳಿಸಲು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಆರಂಭಿಸಲಾಗುತ್ತದೆ. ಹಾಗಾಗಿ ಡಿಕೆ ಶಿವಕುಮಾರ್ ಪ್ರಾಣ ಬಿಡುವ ಮಾತನ್ನಾಡಬಾರದು. 2016-17ರ ಬಜೆಟ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು. ಸಿದ್ದರಾಮಯ್ಯನವರ ಮನವಿ ಮಾಡಿಕೊಂಡಿದ್ದರಿಂದ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಸೂಚಿಸಲಾಗಿತ್ತು.
ರಾಜಕೀಯ ನಿವೃತ್ತಿ: ಸಮ್ಮಿಶ್ರ ಸರ್ಕಾರ ಬಂದ ಮೇಲೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಿಕೆ ಶಿವಕುಮಾರ್ ನಮ್ಮ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಉದ್ದೇಶಪೂರ್ವಕವಾಗಿ ಅನುದಾನ ಬಿಡುಗಡೆ ಮಾಡಿಲಿಲ್ಲ. ಆದರೆ ಕನಕಪುರ ಕಾಲೇಜಿಗೆ ಒಂದೇ ಸಾರಿ 450 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಮೊದಲು ಜಿಲ್ಲೆಗೆ ಮೆಡಿಕಲ್ ಕಾಲೇಜು ಆಗಬೇಕೆಂದು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಉಪ ಚುನಾವಣೆಗೆ ಮುನ್ನವೇ ಚಿಕ್ಕಬಳ್ಳಾಪುರದ ಮೆಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿಸುತ್ತೇನೆ. ಇಲ್ಲವಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ಡಿ.ಕೆ.ಶಿವಕುಮಾರ್ ಕನಕಪುರವನ್ನು ಕರ್ನಾಟಕ ಎಂದು ತಿಳಿದುಕೊಂಡಿದ್ದಾರೆ. ಕನಕಪುರ ಕರ್ನಾಟಕದಲ್ಲಿ ಕೇವಲ ಒಂದು ತಾಲೂಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಎಂದು ಹೇಳಿತ್ತು. ಈಗಾಗಲೇ ರಾಮನಗರಕ್ಕೆ ಆರೋಗ್ಯ ವಿಶ್ವವಿದ್ಯಾಲಯ ಮಂಜೂರು ಆಗಿದೆ. ಕನಕಪುರ ಮೆಡಿಕಲ್ ಕಾಲೇಜಿನ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ನಾನೇನು ಕನಕಪುರದ ಮೆಡಿಕಲ್ ಕಾಲೇಜು ಅನುಮತಿಯನ್ನು ರದ್ದುಗೊಳಿಸಿ ಎಂದು ಹೇಳಿಲ್ಲ ಎಂದರು.
ನೇಣು ಹಾಕೋದು, ನೇಣು ಹಾಕಿಸಿಕೊಳ್ಳವ ಎಂಬಿತ್ಯಾದಿ ಮಾತುಗಳು ಡಿಕೆ ಶಿವಕುಮಾರ್ ಅವರ ಸಂಸ್ಕಾರವನ್ನು ತೋರಿಸುತ್ತದೆ. ಹಿರಿಯರಿಗೆ ಗೌರವ ಕೊಡುವುದು, ಎಲ್ಲರನ್ನು ಪ್ರೀತಿ ಭಾವನೆಯಿಂದ ಕಾಣೋದನ್ನು ನಮ್ಮ ಮನೆಯಲ್ಲಿ ಕಲಿಸಿಕೊಟ್ಟ ಸಂಸ್ಕಾರ. ಹೊಡೆಯೋದು, ಬಡಿಯೋದು, ಕೊಲ್ಲೋದು ಡಿ.ಕೆ.ಶಿವಕುಮಾರ್ ಅವರ ಸಂಸ್ಕೃತಿ. ಹೊಸ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಸ್ತು ಎಂದಿದೆ. ಈ ಬಗ್ಗೆ ಕ್ಯಾಬಿನೆಟ್ ಸಹ ಒಪ್ಪಿಗೆ ಸೂಚಿಸಿದ್ದು, ಮುಖ್ಯಮಂತ್ರಿಗಳು ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆ: ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಅನರ್ಹ ಶಾಸಕ ಸುಧಾಕರ್ ಬೆಂಬಲಿಗರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಗರದ ಪಿ.ಎಲ್.ಡಿ.ಬ್ಯಾಂಕ್ ನಿಂದ ಶಿಡ್ಲಘಟ್ಟ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ಸಾಗಲಿದೆ.