ಬೆಂಗಳೂರು: ಸಮ್ಮಿಶ್ರ ಸರ್ಕಾರದ 2ನೇ ಹಂತದ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಬಹು ದೊಡ್ಡ ಸಮಸ್ಯೆಯಾಗಿದೆ. ಇಂದು ನಡೆದ ಸಭೆ ಬಳಿಕ ಉಸ್ತುವಾರಿ ವೇಣುಗೋಪಾಲ್ ಅವರು ಗರಂ ಆಗಿ ಹೊರ ಬಂದಿದ್ದಾರೆ.
ಸಂಪುಟ ವಿಸ್ತರಣೆ ಅಸಮಾಧಾನದ ಹಿನ್ನೆಲೆಯಲ್ಲಿ ಕೆಲ ಶಾಸಕರ ಬಂಡಾಯದ ಗೊಂಡಿದ್ದು, ಪಕ್ಷದ ಮುಖಂಡರ ಅಸಮಾಧಾನ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ನಲ್ಲಿ ವೇಣುಗೋಪಾಲ್ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉಪಸ್ಥಿತಿ ಇದ್ದರು. ಈ ಸಭೆ ಬಳಿಕ ಹೊರಬಂದ ವೇಣು ಗೋಪಾಲ್ ಅವರು ಗರಂ ಆಗಿ ಕಂಡರು. ತಮ್ಮ ಕಾರು ಬಳಿ ತೆರಳುವ ವೇಳೆ ಸಹಾಯಕನಿಗೆ ಗರಂ ಆಗಿ ಮಾತನಾಡಿಸಿದ ವೇಣುಗೋಪಾಲ್ ಬಳಿಕ ಕಾರಿನಲ್ಲಿ ತೆರಳಿದರು.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ವೇಣುಗೋಪಾಲ್, ಖಾತೆ ಹಂಚಿಕೆ ಬಗ್ಗೆ ಚರ್ಚೆ ಮಾಡಿದ್ದು, ಪಕ್ಷದ ಅಧ್ಯಕ್ಷರು ಖಾತೆ ಅಂತಿಮಗೊಳಿಸುತ್ತಾರೆ. ಆದಷ್ಟು ಬೇಗ ಖಾತೆ ಹಂಚಿಕೆ ಆಗಲಿದೆ. ಕಾಂಗ್ರೆಸ್ನಲ್ಲಿ ಯಾವುದೇ ರೀತಿಯ ಅಸಮಾಧಾನ, ಗೊಂದಲ ಇಲ್ಲ. ಯಾರೂ ಕೂಡ ಕಾಂಗ್ರೆಸ್ ಬಿಟ್ಟು ಹೋಗುವುದು ಇಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಸ್ಪಷ್ಟನೆ ಪಡಿಸಿದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ಅವರ ಅಸಮಾಧಾನದ ಬಗ್ಗೆ ಉತ್ತರಿಸಿದ ಅವರು, ರಮೇಶ್ ಜಾರಕಿಹೊಳಿ ನಮ್ಮ ಉತ್ತಮ ನಾಯಕರಾಗಿದ್ದು, ಅವರೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಅಲ್ಲದೇ ಪಕ್ಷದ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ ಅವರರೊಂದಿಗೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು. ಇದನ್ನು ಓದಿ: ಫೈನಲ್ ಆಯ್ತು ಖಾತೆ ಹಂಚಿಕೆ – ಕೊನೆಗೂ ಗೆದ್ದ ಸಿದ್ದರಾಮಯ್ಯ: ಯಾರಿಗೆ ಯಾವ ಖಾತೆ?
ಇತ್ತ ಖಾತೆ ಹಂಚಿಕೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ನಡುವೆ ಕಿತ್ತಾಟ ನಡೆಸಿದ್ದಾರೆ ಎನ್ನಲಾಗಿದೆ. ಡಿಸಿಎಂ ಅವರ ಬಳಿ ಸದ್ಯ ಬೆಂಗಳೂರು ನಗರಾಭಿವೃದ್ಧಿ ಹಾಗೂ ಗೃಹ ಖಾತೆ ಹೊಂದಿದ್ದಾರೆ. ಈ 2 ಖಾತೆಗಳಲ್ಲಿ ಒಂದನ್ನು ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪರಮೇಶ್ವರ್ ಅವರು ನಿರಾಕರಿಸಿದ್ದಾರೆ. ಆದರೆ ಪಕ್ಷಕ್ಕೆ ಒಳಿತಾಗುವ ಕಾರಣ ಹೇಳಿ ಒಂದು ಖಾತೆ ಬಿಟ್ಟು ಕೊಡಲು ಸಿದ್ದರಾಮಯ್ಯ ಕೇಳಿದ್ದರಿಂದ ಇಬ್ಬರ ನಡುವಿನ ಅಸಮಾಧಾನ ಉಂಟಾಗಿದ್ದು, ಈ ಚರ್ಚೆ ಸದ್ಯ ಹೈಕಮಾಂಡ್ಗೆ ತಲುಪಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv