ಹುಬ್ಬಳ್ಳಿ: ಆಡಿಯೋ, ವಿಡಿಯೋ ಬಿಡುಗಡೆಯ ಬ್ರಹ್ಮ ಯಾರು, ಅದನ್ನು ರೆಕಾರ್ಡ್ ಮಾಡಿದ್ದು ಯಾರು ಎಂದು ದೃಢಪಟ್ಟಿಲ್ಲ. ರೆಕಾರ್ಡ್ ಮಾಡಿದವರು ಯಾರು ಎಂಬುದು ತಿಳಿಯಬೇಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ಅನರ್ಹ ಶಾಸಕರ ಕುರಿತು ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಸಿಎಂ ಮಾತನಾಡಿರುವ ವಿಡಿಯೋ ವೈರಲ್ ಆಗಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಮೊದಲು ಈ ವಿಡಿಯೋ ರೆಕಾರ್ಡ್ ಮಾಡಿರುವವರು ಯಾರು ಎಂಬುದನ್ನು ಕಾಂಗ್ರೆಸ್ನವರು ಬಹಿರಂಗ ಮಾಡಬೇಕಿದೆ ಆಗ್ರಹಿಸಿದರು.
ಕಾಂಗ್ರೆಸ್ ಸುಳ್ಳು ಆರೋಪ ಮಾಡಿ ಸುಪ್ರೀಂಕೋರ್ಟ್ ಮೇಟ್ಟಿಲೇರಲು ಮುಂದಾಗಿದೆ. ಕಾಂಗ್ರೆಸ್ ಕಾಲು ಕೆದರಿಕೊಂಡು ಜಗಳ ಮಾಡುತ್ತಿದೆ. ಆಧಾರವಿಲ್ಲದೆ ಕೇವಲ ಆಡಿಯೋ, ವಿಡಿಯೋಗಳನ್ನು ಸಾಕ್ಷಿ ಎಂದು ಸುಪ್ರೀಂ ಕೋರ್ಟ್ ಪರಿಗಣಿಸುವುದಿಲ್ಲ. ಇದು ತಿಳಿದಿದ್ದರೂ ಸಹ ಕಾನೂನು ಪಂಡಿತರಾಗಿರುವ ಸಿದ್ದರಾಮಯ್ಯನವರು ರಾಜ್ಯಪಾಲರಿಗೆ ದೂರು ನೀಡಿ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಆಡಿಯೋ-ವಿಡಿಯೋ ಸಾಕ್ಷಿ ನಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪನವರ ಸರ್ಕಾರ ಬಲಾಢ್ಯವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯಗಳಿಲ್ಲದೆ ಈ ರೀತಿಯ ವಿಷಯಗಳಿಂದ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಅನರ್ಹರ ಕುರಿತು ಹಸಿ ಸುಳ್ಳನ್ನು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅವರ ಪಕ್ಷದ ವೈಫಲ್ಯದಿಂದಲೇ ಅನರ್ಹ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಸದ್ಯಕ್ಕೆ ಸರ್ಕಾರ ಬೀಳಿಸಲು ಪ್ರಯತ್ನಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಅವರು ಬಿಜೆಪಿಗೆ ಬೆಂಬಲ ಕೊಡುವ ಕುರಿತು ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಅವರ ಹೇಳಿಕೆಯಿಂದ ಬೆಂಬಲ ನೀಡುತ್ತಾರೆಂದು ತಿಳಿಯಲ್ಲ. ಇಬ್ಬರೂ ಕೈ ಕುಲಕಿದ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯವರೇ ಉತ್ತರ ನೀಡಬೇಕು. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರಿಂದ ಅಧಿಕೃತವಾಗಿ ಹೇಳಿಕೆ ಬರಲಿ. ಆಗ ಅದಕ್ಕೆ ಗಾಂಭೀರ್ಯತೆ ಇರುತ್ತದೆ. ಕುಮಾರಸ್ವಾಮಿಯವರು ದಿನಕ್ಕೊಂದು ಹೇಳಿಕೆ ನೀಡಿದರೆ ನಾವು ಮೂರ್ಖರಾಗಬೇಕಾ ಎಂದು ಹರಿಹಾಯ್ದರು.