ಪುನೀತ್ ರಾಜ್ ಕುಮಾರ್ (Puneeth Rajkumar) ಪತ್ನಿ ಅಶ್ವಿನಿ (Ashwini) ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಗಜಪಡೆ ಸೋಷಿಯಲ್ ಮೀಡಿಯಾ ಖಾತೆಯಿಂದ ಅಶ್ವಿನಿ ಅವರಿಗೆ ಅವಹೇಳನ ಮಾಡಲಾಗಿತ್ತು. ಈ ಕೃತ್ಯವನ್ನು ದರ್ಶನ್ (Darshan) ಅಭಿಮಾನಿಗಳು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಪ್ಪು ಅಭಿಮಾನಿಗಳು ನಾಲ್ಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರುಳರ ಹೆಡೆಮೂರಿ ಕಟ್ಟುವಂತೆ ಗೃಹ ಸಚಿವರಿಗೂ ವಿನಂತಿಸಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಇಲ್ಲಿಗೆ ಏನೋ ಒಂದು ತಾರ್ಕಿಕ ಅಂತ್ಯ ಸಿಗಬಹುದು ಎನ್ನುತ್ತಿರುವಾಗಲೇ ಧ್ರುವ ಸರ್ಜಾ ಅಭಿಮಾನಿಗಳನ್ನು ಈ ಘಟನೆಯಲ್ಲಿ ಎಳೆತರಲಾಗುತ್ತಿದೆಯಂತೆ.
ಈ ಪ್ರಕರಣದಲ್ಲಿ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳನ್ನು ಎಳೆತಂದಿರುವುದಕ್ಕೆ ಧ್ರುವ ಸರ್ಜಾ ಅಭಿಮಾನಿಗಳು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ಸಾಮಾಜಿಕ ಜಾಲತಾಣದ ಜಗಳಕ್ಕೆ ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳನ್ನ ಎಳೆತಂದಿರುವುದನ್ನು ಖಂಡಿಸಿದ್ದಾರೆ.
ಧ್ರುವ ಸರ್ಜಾ ಅಭಿಮಾನಿಗಳ ಹೆಸರಿಗೆ ಮಸಿ ಬಳಿಯಲು ದರ್ಶನ್ ಫ್ಯಾನ್ಸ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದಾರೆ. ಕಿಡಿಗೇಡಿ ಯಾರೆಂದು ಪತ್ತೆ ಮಾಡ್ಬೇಕು. ನಮ್ಮ ಮೇಲೆ ಬೆರಳು ತೋರಿಸುವ ಪ್ರಯತ್ನ ನಡೆಯುತ್ತಿದೆ . ಈ ವಿಚಾರಕ್ಕೆ ಶೀಘ್ರ ತನಿಖೆಗೆ ಆಗ್ರಹಿಸಿವೆವು ಎಂದಿದ್ದಾರೆ ಧ್ರುವ ಫ್ಯಾನ್ಸ್.