ನವದೆಹಲಿ: ಕರ್ನಾಟಕದ ಸ್ಪೀಕರ್ ಹಾದಿಯನ್ನೇ ದೆಹಲಿ ಸ್ಪೀಕರ್ ಸಹ ತುಳಿದಿದ್ದು, ಎಎಪಿ ತೊರೆದು ಬಿಜೆಪಿ ಸೇರಿದ್ದ ಇಬ್ಬರು ಶಾಸಕರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ.
ದೆಹಲಿ ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಗುರುವಾರ ಈ ಆದೇಶ ಹೊರಡಿಸಿದ್ದು, ಎಎಪಿ ತೊರೆದು ಬಿಜೆಪಿ ಸೇರಿದ್ದ ಇಬ್ಬರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದಾರೆ. ಅನಿಲ್ ಬಜ್ಪಾಯಿ ಮತ್ತು ದೇವಿಂದರ್ ಸಿಂಗ್ ಶರಾವತ್ ಇಬ್ಬರು ಶಾಸಕರು ಎಎಪಿ ಟಿಕೆಟ್ನಿಂದ ಗೆದ್ದು ಬಂದಿದ್ದರು. ಆದರೆ ಆಡಳಿತಾರೂಢ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು ಹೀಗಾಗಿ ಅಮಾನತುಗೊಳಿಸಿದ್ದಾರೆ.
ಗಾಂಧಿ ನಗರ ಶಾಸಕ ಅನಿಲ್ ಬಜ್ಪಾಯಿ ಅವರು ಮೇ 3 ರಂದು ಎಎಪಿ ತೊರೆದಿದ್ದರು. ಬಿಜೆಪಿಯ ಕುದುರೆ ವ್ಯಾಪಾರಕ್ಕೊಳಗಾಗಿ ಎಎಪಿ ತೊರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಸಮಯದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಏಳು ಶಾಸಕರಿಗೆ ತಲಾ 10 ಕೋಟಿ ರೂ. ಆಫರ್ ನೀಡಿ ಬಿಜೆಪಿ ನಮ್ಮ ಶಾಸಕರನ್ನು ಖರೀದಿಸುತ್ತಿದೆ ಎಂದು ಆರೋಪಿಸಿದ್ದರು.
ಈ ಆರೋಪವನ್ನು ಬಜ್ಪಾಯಿ ನಿರಾಕರಿಸಿದ್ದರು. ಅಲ್ಲದೆ, ಬಿಜೆಪಿಯಿಂದ ನಾನು ಯಾವುದೇ ರೀತಿಯ ಹಣ ಪಡೆದಿಲ್ಲ. ಮತ್ತೊಬ್ಬರ ಮೇಲೆ ಆರೋಪ ಹೊರಿಸುವುದು, ನಂತರ ಕ್ಷಮೆಯಾಚಿಸುವುದು ಅರವಿಂದ ಕೇಜ್ರಿವಾಲ್ ಅವರ ಹವ್ಯಾಸವಾಗಿದೆ ಎಂದು ಆರೋಪಿಸಿದ್ದಾರೆ.
ಬಜ್ಪಾಯಿ ಅವರು ಬಿಜೆಪಿ ಸೇರಿದ ನಾಲ್ಕು ದಿನಗಳ ನಂತರ ಮೇ.7 ರಂದು ಬಿಜ್ವಾಸನ್ ಶಾಸಕ ದೇವಿಂದರ್ ಶರಾವತ್ ಅವರು ಬಿಜೆಪಿ ಸೇರಿದ್ದರು. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ದೇವಿಂದರ್ ಸಿಂಗ್ ಶರಾವತ್, ಎಎಪಿ ಸಂಪೂರ್ಣವಾಗಿ ಕಡೆಗಣಿಸಿ, ನನ್ನನ್ನು ಮೂಲೆಗುಂಪು ಮಾಡಿದೆ. ಅಲ್ಲದೆ, ಪಕ್ಷದ ಸಮಾರಂಭಗಳಿಗೂ ಆಹ್ವಾನಿಸದೇ ನಿರ್ಲಕ್ಷ್ಯವಹಿಸಿದೆ. ಪಕ್ಷ ನನ್ನನ್ನು ಅವಮಾನಿಸಿದರೂ ಸಹ ನಾನು ಅದನ್ನು ಗಂಭೀರವಾಗಿ ಪರಿಗಣಿಸದೆ, ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದರು.
ಸ್ಪೀಕರ್ ರಾಮ್ ನಿವಾಸ್ ಗೋಯಲ್ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಕಪಿಲ್ ಮಿಶ್ರಾ ಅವರನ್ನು ಅನರ್ಹಗೊಳಿಸಿದ್ದರು.
ಆಗಸ್ಟ್ 2ರಂದು ಕರವಾಲ್ ನಗರದ ಶಾಸಕ ಮಿಶ್ರಾ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ಆದೇಶಿಸಿದ್ದರು. ಜನವರಿ 27ರಂದು ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದಾಗಿನಿಂದ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.