ಮಂಗಳೂರು: ಮಗಳ ಸಮಯಪ್ರಜ್ಞೆಯಿಂದ ತಾಯಿ ಭಾರೀ ಅವಘಡದಿಂದ ಪಾರಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಕೆಯ್ಯೂರು ಗ್ರಾಮ (Keyyur) ದಲ್ಲಿ ನಡೆದಿದೆ.
ವಿಷಯುಕ್ತ ಹಾವೊಂದು ತಾಯಿಗೆ ಕಚ್ಚಿದ್ದು, ಕೂಡಲೇ ಎಚ್ಚೆತ್ತ ಮಗಳು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ನಡೆದಿದ್ದೇನು..?: ಕೆಯ್ಯೂರು ಗ್ರಾಮಪಂಚಾಯತ್ ಸದಸ್ಯೆ ಮಮತಾ ರೈ (Mamatha Rai) ಯವರು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಮಾವಿನ ತೋಟಕ್ಕೆ ನೀರು ಬಿಡಲೆಂದು ಪಂಪ್ಸೆಟ್ಗೆ ಸ್ವಿಚ್ ಹಾಕಲು ತೆರಳಿದ್ದರು. ಈ ವೇಳೆ ಅವರ ಕಾಲಿಗೆ ವಿಷಯುಕ್ತ ಹಾವೊಂದು ಕಚ್ಚಿದೆ. ಪರಿಣಾಮ ಕಾಲಿನಿಂದ ರಕ್ತ ಸೋರುತ್ತಿತ್ತು. ಕೂಡಲೇ ಅವರು ಮನೆಗೆ ಬಂದು ವಿಚಾರ ತಿಳಿಸಿದ್ದಾರೆ.
ಮನೆಯಲ್ಲಿದ್ದ ಕೆಲಸದವರು ಮಮತಾ ಅವರ ಕಾಲಿಗೆ ಬೈಹುಲ್ಲಿನಿಂದ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮಗಳು ಶ್ರಾವ್ಯಾ (Shravya), ಹಾವು ಕಚ್ಚಿದ ಭಾಗದಿಂದ ಬಾಯಿ ಮೂಲಕ ರಕ್ತ ಹೀರಿದ್ದಾರೆ. ಇದಾದ ಬಳಿಕ ಮಮತಾರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ.
ಇತ್ತ ಮಮತಾಗೆ ಚಿಕಿತ್ಸೆ ನೀಡಿದ ವೈದ್ಯರು, ಶ್ರಾವ್ಯಾಳ ಕಾರ್ಯಕ್ಕೆ ಮಚ್ಚುಗೆ ಸೂಚಿಸಿದ್ದಾರೆ. ಕೂಡಲೇ ರಕ್ತ ಹೀರಿದ್ದರಿಂದ ಮಮತಾ ಭಾರೀ ಅಪಾಯದಿಂದ ಪಾರಾಗಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ- ಐತಿಹಾಸಿಕ ದೇವಾಲಯದಲ್ಲಿ ಕೌತುಕ
ಶ್ರಾವ್ಯಾ ಅವರು ಪುತ್ತೂರು ವಿವೇಕಾನಂದ ಕಾಲೇಜಿ (Vivekananda Collage) ನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ಶ್ರಾವ್ಯಾ ದಿಟ್ಟತನಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.