ಮೈಸೂರು: ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೀವು ಎರಡು ಬಾರಿ ದಸರಾ ಜಂಬೂ ಸವಾರಿಯನ್ನು ಕಣ್ತುಂಬಿ ಕೊಳ್ಳಬಹುದು. ಇಷ್ಟು ದಿನ ವಿಜಯದಶಮಿ ದಿನ ಮಾತ್ರ ನಡೆಯುತ್ತಿದ್ದ ಜಂಬೂ ಸವಾರಿ ಈ ಬಾರಿ ಎರಡು ಬಾರಿ ನಡೆಯಲಿದೆ.
ಪ್ರತಿ ವರ್ಷವೂ ದಸರಾ ಪಂಜಿನ ಕವಾಯತು ಎರಡು ಬಾರಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಎರಡು ದಿನ ಮುಂಚೆ ರಿಹರ್ಸಲ್ ರೂಪದಲ್ಲಿ ಪಂಚಿನ ಕವಾಯತು ನಡೆಯುತ್ತದೆ. ಈ ಬಾರಿ ಜಂಬೂ ಸವಾರಿಯೂ ಕೂಡ ರಿಹರ್ಸಲ್ ನಡೆಯುವ ಕಾರಣ ಎರಡು ಬಾರಿ ಜನರು ಜಂಬೂ ಸವಾರಿ ನೋಡಬಹುದಾಗಿದೆ.
ಅಕ್ಟೋಬರ್ 17 ರಂದು ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ. ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೂ ರಿಹರ್ಸಲ್ನ ಮೆರವಣಿಗೆ ಸಾಗಲಿದೆ. ಸ್ಥಬ್ಧ ಚಿತ್ರ ಹೊರತು ಪಡಿಸಿ ಎಲ್ಲಾ ಕಲಾ ತಂಡಗಳು ಮತ್ತು ಜಂಬೂ ಸವಾರಿ ದಿನ ಪಾಲ್ಗೋಳುವುದಕ್ಕೆ ಅವಕಾಶ ಸಿಗದ ಕಲಾ ತಂಡಗಳು ರಿಹರ್ಸಲ್ನಲ್ಲಿ ಭಾಗಿಯಾಗಲಿವೆ.
ಕ್ಯಾಪ್ಟನ್ ಅರ್ಜುನ ನೇತೃತ್ವದ ಎಲ್ಲಾ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ. ಆದರೆ ಅರ್ಜುನನಿಗೆ ಚಿನ್ನದ ಅಂಬಾರಿ ಹೊರಿಸಬೇಕೆ ಅಥವಾ ಮರದ ಅಂಬಾರಿಯನ್ನು ಮಾತ್ರ ಹೊರಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಇದನ್ನು ಹೊರತು ಪಡಿಸಿ ಜಂಬೂ ಸವಾರಿ ಹೇಗೆ ನಡೆಯುತ್ತೋ ಅದೇ ರೀತಿ ರಿಹರ್ಸಲ್ ಕೂಡ ನಡೆಯುತ್ತದೆ. ಜಂಬೂ ಸವಾರಿ ದಿನ ಬಹುತೇಕರಿಗೆ ಮೆರವಣಿಗೆ ವೀಕ್ಷಿಸಲು ಆಗುವುದಿಲ್ಲ. ಅಂತವರಿಗೆ ಇದೊಂದು ಅವಕಾಶವಾಗಿದೆ. ಮೆರವಣಿಗೆ ದಿನಕ್ಕೆ ಹೆಚ್ಚಿನ ಜನರನ್ನು ಮೈಸೂರಿನತ್ತ ಸೆಳೆಯುವ ಉದ್ದೇಶದಿಂದ ಕೂಡ ಈ ರಿಹರ್ಸಲ್ ಸಹಕಾರಿ ಅನ್ನೋದು ಜಿಲ್ಲಾಡಳಿತದ ಲೆಕ್ಕಚಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.
ಖುದ್ದು ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಬೂ ಸವಾರಿ ರಿಹರ್ಸಲ್ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ. ಈ ರಿಹರ್ಸಲ್ ಯಶಸ್ವಿಯಾಗಿ ನಡೆದರೆ ಜಂಬೂ ಸವಾರಿ ರಿಹರ್ಸಲ್ ಅನ್ನೋದು ದಸರಾದಲ್ಲಿ ಖಾಯಂ ಆಗಿ ಉಳಿಯುತ್ತದೆ ಎಂದು ಶಂಕರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv