ವೀರೇಶ್ ದಾನಿ
ಬಳ್ಳಾರಿ: ಜಿಲ್ಲೆಯಲ್ಲಿ ಈ ಭಾರಿ ಎಂದೂ ಕಂಡರಿಯದ ಭೀಕರ ಬರಗಾಲ ಪರಿಸ್ಥಿತಿ ಆವರಿಸಿದೆ. ಬರದ ತೀವ್ರತೆಗೆ ರೈತರು ಬೆಳೆದ ಬೆಳೆಗಳಲ್ಲಾ ಒಣಗಿ ಹೋಗಿವೆ. ಅದರಲ್ಲೂ ಅರಬ್ ದೇಶಗಳು ಸೇರಿದಂತೆ ವಿವಿಧ ದೇಶಗಳಿಗೆ ರಪ್ತಾಗುತ್ತಿದ್ದ ಕರಿಬೇವು ಸೊಪ್ಪಿಗೂ ಈ ಬಾರಿ ಬರದ ಬಿಸಿ ತಟ್ಟಿದೆ. ನೀರಿಲ್ಲದ ಪರಿಣಾಮ ಕರಿಬೇವು ಬೆಳೆದ ರೈತರ ಬೆಳೆಗಳಲ್ಲಾ ಸಂಪೂರ್ಣ ಒಣಗಿ ಹೋಗಿವೆ.
ಎಲ್ಲರ ಮನೆಯ ಅಡುಗೆಯ ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೆ ಬೇಕು. ಅದರಲ್ಲೂ ದೂರದ ಅರಬ್ ದೇಶಗಳಿಗೆ ರಪ್ತಾಗುತ್ತಿದ್ದ ಬಳ್ಳಾರಿಯ ಸುವಾಸನೆ ಭರಿತ ಕರಬೇವು ಸೊಪ್ಪಿನ ಬೆಳೆಗಳೆಲ್ಲಾ ಈ ಬಾರಿ ಜಿಲ್ಲೆಯಲ್ಲಿ ಒಣಗಿ ಹೋಗಿವೆ. ಅಷ್ಟೊಂದು ಪ್ರಮಾಣದಲ್ಲಿ ಕರಿಬೇವು ಸೊಪ್ಪಿಗೂ ಬರದ ಬಿಸಿ ತಟ್ಟಿದೆ. ರೈತರಿಗೆ ಆದಾಯ ತರುತ್ತಿದ್ದ ಕರಿಬೇವು ಬೆಳೆಯೆಲ್ಲಾ ಒಣಗಿ ಹೋದ ಪರಿಣಾಮ ಬಳ್ಳಾರಿ ತಾಲೂಕಿನ ಬೆಳಗಲ್, ಬೆಳಗಲ್ ತಾಂಡಾ ಸೇರಿದಂತೆ ಹಲವು ಹಳ್ಳಿಗಳಲ್ಲಿ ಬೆಳೆದ ನೂರಾರು ಎಕರೆಯಲ್ಲಿನ ಕರಿಬೇವು ಬೆಳೆ ಇದೀಗ ನೀರಿಲ್ಲದೆ ಸಂಪೂರ್ಣವಾಗಿ ನಾಶವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಸರಿಯಾಗಿ ಮಳೆಯಾಗದ ಪರಿಣಾಮ, ರೈತರ ತೋಟಗಾರಿಕೆ ಬೆಳೆಗಳಿಗೂ ನೀರು ಪೂರೈಕೆ ಆಗುತ್ತಿಲ್ಲ. ಇನ್ನು ರೈತರು ಬೋರ್ವೆಲ್ ಗಳನ್ನು 500 ರಿಂದ 700 ಅಡಿ ಕೊರೆದರು ನೀರು ಸಿಗುತ್ತಿಲ್ಲ.
ಒರಿಸ್ಸಾ ರಾಜ್ಯದಿಂದ ಲಕ್ಷಾಂತರ ರೂಪಾಯಿ ಕೊಟ್ಟು ಬೀಜ ಖರೀದಿಸಿ ಕರಿಬೇವು ಸೊಪ್ಪು ಬೆಳೆದಿದ್ದವರಿಗೆ ನೀರು ಸಿಗದ ಪರಿಣಾಮ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕಡಿಮೆ ನೀರು ಬಳಸಿ ತೋಟಗಾರಿಕೆ ಮಾಡುವ ಮೂಲಕ ಕರಿಬೇವು ಬೆಳೆದಿದ್ದ ರೈತರಿಗೆ ಇದೀಗ ಸರ್ಕಾರ ಬರ ಪರಿಹಾರ ನೀಡುವ ಮೂಲಕ ನಷ್ಟ ಹೊಂದಿರುವ ರೈತರ ಸಹಾಯಕ್ಕೆ ಮುಂದಾಗಬೇಕಿದೆ.