ಚಿಕ್ಕಮಗಳೂರು: ಡಾ. ರಾಜ್ಕುಮಾರ್ ಅಭಿನಯದ ಆಕಸ್ಮಿಕ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗೆ ಶಾಸಕ ಸಿ.ಟಿ ರವಿ (CT Ravi) ಮಸ್ತ್ ಸ್ಟೆಪ್ (Dance) ಹಾಕಿದ್ದಾರೆ. ತಾವೇ ಹಾಡು ಹೇಳಿಕೊಂಡು ಕುಣಿಯುವಾಗ ಪಕ್ಕದಲ್ಲೇ ನಿಂತಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಚಿಕ್ಕಮಗಳೂರು (Chikkamagaluru) ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಚಪ್ಪಾಳೆ ತಟ್ಟುವ ಮೂಲಕ ಸಿ.ಟಿ ರವಿಗೆ ಸಾಥ್ ನೀಡಿದ್ದಾರೆ.
ಇಂದು ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಕೋಟಿ ಕಂಠ ಗಾಯನ (Koti Kantha gayana) ಕಾರ್ಯಕ್ರಮದಲ್ಲಿ ವೈಟ್ ಅಂಡ್ ವೈಟ್ ಡ್ರೆಸ್ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ `ಜಯ ಭಾರತ ಜನನಿಯ ತನುಜಾತೆ’, `ಬಾರಿಸು ಕನ್ನಡ ಡಿಂಡಿಮವ’, ಹುಯಿಲಗೋಳ ನಾರಾಯಣರ ರಚನೆಯ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಡಾ.ಡಿ.ಎಸ್ ಕರ್ಕಿ ಅವರ `ಹಚ್ಚೇವು ಕನ್ನಡದ ದೀಪ’, ಚನ್ನವೀರಕಣವಿ ಬರೆದಿರುವ `ವಿಶ್ವ ವಿನೂತನ ವಿದ್ಯಾ ಚೇತನ’ ಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಯಿತು.
ಕೋಟಿ ಕಂಠ ಗಾಯನ ಕನ್ನಡಿಗರನ್ನು ಭಾರತೀಯತೆಗೆ ಜೋಡಿಸಿದೆ. ತಾಯಿ ಭಾರತಿಗೆ ಅಮೃತದಾರತಿ ಎನ್ನುವಂತೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಸರ್ಕಾರ ಈ ಅಭಿಯಾನವನ್ನು ಆಯೋಜನೆ ಮಾಡಿದೆ. ಕನ್ನಡಿಗರನ್ನು ಒಟ್ಟಿಗೆ ಸೇರಿಸಿ ಕನ್ನಡವನ್ನು ಕೋಟಿ ಕಂಠಗಳ ಮೂಲಕ ಕಟ್ಟುವ ಕಾರ್ಯವನ್ನು ಸರ್ಕಾರ ಮಾಡಿದೆ. ನಮ್ಮ ಹೃದಯದಲ್ಲಿ ದೇಶಾಭಿಮಾನ, ಭಾಷಾಭಿಮಾನ ಬಂದರೆ ಮಣಿಸುವ ತಾಕತ್ತು ಯಾರಿಗೂ ಇರುವುದಿಲ್ಲ. ಭಾಷೆಯ ಮೂಲಕ ದೇಶ ಕಟ್ಟುವ ಕಾರ್ಯವನ್ನು ಸರ್ಕಾರ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಸಿ.ಟಿ ರವಿ ಹೇಳಿದ್ದಾರೆ. ಇದನ್ನೂ ಓದಿ: ಕೋಟಿ ಕಂಠ ಗಾಯನದಲ್ಲಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಪ್ರಹ್ಲಾದ್ ಜೋಶಿ
ಶಾಸಕ ಸಿ.ಟಿ ರವಿ ಹಾಡು ಹೇಳಿಕೊಂಡು ಕುಣಿಯುತ್ತಿದ್ದಂತೆ ಅಲ್ಲೇ ಇದ್ದ ಕಾಫಿನಾಡು ಚಂದು ಕೂಡ ಅವರ ಜೊತೆ ಸೇರಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: 67ನೇ ಕನ್ನಡ ರಾಜ್ಯೋತ್ಸವ – ಸುವರ್ಣ ಸೌಧದಲ್ಲಿ ಕೋಟಿ ಕಂಠ ಗಾಯನ